ಗೋ ಹತ್ಯೆ ಶಂಕೆಯಲ್ಲಿ ಬುಡಕಟ್ಟು ಜನರಿಗೆ ಥಳಿಸಿ ತಲೆಬೋಳಿಸಿದ ದುಷ್ಕರ್ಮಿಗಳು
ರಾಂಚಿ, ಸೆ.28: ಗೋ ಹತ್ಯೆ ಮಾಡಿದರೆಂಬ ಶಂಕೆಯ ಹಿನ್ನೆಲೆಯಲ್ಲಿ ಬುಡಕಟ್ಟು ಸಮುದಾಯದ 7 ವ್ಯಕ್ತಿಗಳ ಮೇಲೆ ಗುಂಪು ಹಲ್ಲೆ ನಡೆಸಿ ಅವರಿಗೆ ‘ಜೈಶ್ರೀರಾಂ’ ಎಂದು ಹೇಳುವಂತೆ ಬಲವಂತಪಡಿಸಿದ ಘಟನೆ ಜಾರ್ಖಂಡ್ನ ಸಿಮ್ದೇಗ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ ಎಂದು ‘Thequint.com’ ವರದಿ ಮಾಡಿದೆ.
ಪ್ರಕರಣ ದಾಖಲಿಸಿದ್ದು 9 ಆರೋಪಿಗಳಲ್ಲಿ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸೆಪ್ಟಂಬರ್ 16ರಂದು ಭೇರಿಕುಡರ್ ಗ್ರಾಮದ ಅಂಬೇರ ಟೋಲಿ ಎಂಬಲ್ಲಿ ಘಟನೆ ನಡೆದಿದ್ದು ಸೆಪ್ಟಂಬರ್ 25ರಂದು ಬೆಳಕಿಗೆ ಬಂದಿದೆ. ಸುಮಾರು 50 ಮಂದಿಯಿದ್ದ ಗುಂಪೊಂದು ದೊಣ್ಣೆ ಮತ್ತಿತರ ಆಯುಧಗಳ ಸಹಿತ ಮನೆಗೆ ನುಗ್ಗಿ ತನ್ನ ಬಾವ(ಸಹೋದರಿಯ ಪತಿ) ರಾಜ್ಸಿಂಗ್ ಕುಲ್ಲುನನ್ನು ಥಳಿಸಿದ್ದು ಸಹೋದರಿ ರೊಸಾಲಿನ್ ಕುಲ್ಲು ವಿರುದ್ಧ ಆಕ್ಷೇಪಾರ್ಹ ಪದಗಳಿಂದ ನಿಂದಿಸಿದೆ . ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ ನೀವು ಗೋಹತ್ಯೆ ಮಾಡುತ್ತಿದ್ದೀರಿ ಎಂದು ಆರೋಪಿಸಿದ್ದಾರೆ. ಆರೋಪಕ್ಕೆ ಪುರಾವೆ ಕೇಳಿದಾಗ ನಕಲಿ ವೀಡಿಯೊ ದೃಶ್ಯ ತೋರಿಸಿದ್ದಾರೆ. ಇದು ನಕಲಿ ವೀಡಿಯೊ ಎಂದು ಹೇಳಿದಾಗ ಮತ್ತೆ ಹಲ್ಲೆ ಹಾಗೂ ಜಾತಿ ನಿಂದನೆ ಮುಂದುವರಿಸಿದ್ದಾರೆ ಎಂದು ದೀಪಕ್ ಕುಲ್ಲು ಎಂಬಾತ ಹೇಳಿರುವುದಾಗಿ ವರದಿಯಾಗಿದೆ.
“ನಮ್ಮ ತಲೆ ಬೋಳಿಸಿ ಚಪ್ಪಲಿಯ ಮಾಲೆ ಹಾಕಿ, ‘ಜೈಶ್ರೀರಾಂ’ ಎಂದು ಹೇಳುವಂತೆ ಬಲವಂತ ಮಾಡಿ ಗ್ರಾಮದಲ್ಲಿ ಮೆರವಣಿಗೆ ನಡೆಸಿದ್ದಾರೆ. ಗೋಹತ್ಯೆ ನಡೆಸಿದರೆ ನಿಮ್ಮ ತಲೆ ಕಡಿಯುತ್ತೇವೆ ಎಂದು ಘೋಷಣೆ ಕೂಗಿದ್ದಾರೆ” ಎಂದು ದೀಪಕ್ ಕುಲ್ಲು ಆರೋಪಿಸಿದ್ದಾನೆ.
ಈ ಬಗ್ಗೆ ತಕ್ಷಣ ವಾರ್ಡ್ನ ಸದಸ್ಯರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತಮ್ಮ ಮನೆಯಲ್ಲಿ ಶೋಧ ನಡೆಸಿದರೂ ಗೋ ಹತ್ಯೆ ನಡೆದ ಬಗ್ಗೆ ಯಾವುದೇ ಪುರಾವೆ ಲಭಿಸಿಲ್ಲ. ರೊಸಾಲಿನ್ ಕುಲ್ಲು ಕೂಡಾ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ ಎಂದು ಕುಲ್ಲು ಹೇಳಿದ್ದಾನೆ.
ಪ್ರಕರಣದ ಹಿನ್ನೆಲೆಯಲ್ಲಿ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಹಾಗೂ ಐಪಿಸಿಯ ಹಲವು ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿದ್ದು , 9 ಆರೋಪಿಗಳಲ್ಲಿ 4 ಮಂದಿಯನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಬಂಧನಕ್ಕೆ ಡಿಎಸ್ಪಿ ನೇತೃತ್ವದ ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ಸಿಮ್ದೇಗ ಠಾಣೆಯ ಪ್ರಭಾರಿ ಅಧಿಕಾರಿ ರವೀಂದ್ರ ಪ್ರಸಾದ್ ಸಿಂಗ್ ಹೇಳಿದ್ದಾರೆ. ಗೋಹತ್ಯೆ ನಡೆದಿರುವುದಕ್ಕೆ ಪುರಾವೆ ಲಭಿಸಿಲ್ಲ. ಅಲ್ಲದೆ ‘ಜೈಶ್ರೀರಾಂ’ ಹೇಳುವಂತೆ ಬಲವಂತ ಮಾಡಲಾಗಿಲ್ಲ. ದೂರುದಾರರಿಗೆ ಗಂಭೀರ ಗಾಯವಾಗಿಲ್ಲ ಮತ್ತು ಯಾರನ್ನೂ ಚಿಕಿತ್ಸೆಗೆ ದಾಖಲಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.