ಹತ್ರಸ್ ಸಾಮೂಹಿಕ ಅತ್ಯಾಚಾರ ಪ್ರಕರಣ: ಸಮಗ್ರ ತನಿಖೆಗೆ ಎಸ್ಐಟಿ ತಂಡ ರಚನೆ
ಲಕ್ನೋ : ಹತ್ರಸ್ ಗ್ರಾಮದಲ್ಲಿ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಮತ್ತು ಸಾವು ಪ್ರಕರಣದ ಕೂಲಂಕಷ ತನಿಖೆ ನಡೆಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ತ್ರಿಸದಸ್ಯ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿದ್ದಾರೆ. ಈ ಕುರಿತಂತೆ ಮುಖ್ಯಮಂತ್ರಿ ಕಾರ್ಯಾಲಯ ಟ್ವೀಟ್ ಮಾಡಿದೆ.
ಈ ತನಿಖಾ ತಂಡದ ನೇತೃತ್ವವನ್ನು ರಾಜ್ಯ ಗೃಹ ಕಾರ್ಯದರ್ಶಿ ಭಗ್ವಾನ್ ಸ್ವರೂಪ್ ವಹಿಸಲಿದ್ದು ಡಿಐಜಿ ಚಂದ್ರಪ್ರಕಾಶ್ ಮತ್ತು ಉತ್ತರ ಪ್ರದೇಶ ಪಿಎಸಿ ಸೇನಾ ನಾಯಕ್ ಪೂನಂ ಸದಸ್ಯರಾಗಿರಲಿದ್ದಾರೆ. ಏಳು ದಿನಗಳೊಳಗೆ ವರದಿ ಸಲ್ಲಿಸುವಂತೆ ತಂಡಕ್ಕೆ ಸೀಎಂ ನಿರ್ದೇಶನ ನೀಡಿದ್ದಾರೆ.
ಪ್ರಕರಣದ ವಿಚಾರಣೆಯನ್ನು ತ್ವರಿತ ನ್ಯಾಯಾಲಯದಲ್ಲೂ ನಡೆಸುವಂತೆ ಸೀಎಂ ಸೂಚಿಸಿದ್ದಾರೆಂದು ಮುಖ್ಯಮಂತ್ರಿ ಕಾರ್ಯಾಲಯ ಟ್ವೀಟ್ ಮಾಡಿದೆ.
ಹತ್ತೊಂಬತ್ತು ವರ್ಷದ ದಲಿತ ಯುವತಿ ಹತ್ರಸ್ ನಲ್ಲಿ ಸೆಪ್ಟೆಂಬರ್ 14ರಂದು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಬರ್ಬರವಾಗಿ ಹಲ್ಲೆಗೂ ಒಳಗಾಗಿದ್ದಳು. ಆರಂಭದಲ್ಲಿ ಆಲಿಘರ್ನ ಜೆಎನ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಆಕೆಯನ್ನು ದಾಖಲಿಸಲಾಗಿತ್ತು. ನಂತರ ರಾಜಧಾನಿಯ ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ಆಕೆ ಮಂಗಳವಾರ ಮೃತಪಟ್ಟಿದ್ದಳು.
ಪ್ರಕರಣದ ಎಲ್ಲಾ ನಾಲ್ಕು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.