ದೈತ್ಯ ಮೀನಿನಿಂದ ಒಂದೇ ದಿನದಲ್ಲಿ ಲಕ್ಷಾಧಿಪತಿಯಾದ ಬಡ ವೃದ್ಧೆ
ಕೊಲ್ಕತ್ತಾ: ಪಶ್ಚಿಮ ಬಂಗಾಳದ ಸೌತ್ 24 ಪರಗಣ ಜಿಲ್ಲೆಯ ಸುಂಡರ್ಬನ್ಸ್ ಪ್ರದೇಶದ ಸಾಗರ ದ್ವೀಪದ ನಿವಾಸಿಯಾಗಿರುವ ಪುಷ್ಪಾಕರ್ ಎಂಬ ಮಹಿಳೆ ರಾತ್ರಿ ಬೆಳಗಾಗುವುದರಲ್ಲಿ ಲಕ್ಷಾಧಿಪತಿಯಾಗಿದ್ದಾರೆ. ಆದರೆ ಆಕೆಯೇನೂ ಲಾಟರಿ ಗೆದ್ದಿಲ್ಲ, ಬದಲಾಗಿ ಬೃಹತ್ ಗಾತ್ರದ ಮೀನೊಂದನ್ನು ಆಕೆ ಹಿಡಿದಿರುವುದೇ ಇದಕ್ಕೆ ಕಾರಣ.
ಮೀನು ಹಿಡಿಯಲೆಂದು ನದಿ ಪಕ್ಕ ಹೋಗಿದ್ದ ಪುಷ್ಪಾ ಕರ್ ಎಂಬ ವೃದ್ಧೆಗೆ ದೈತ್ಯ ಮೀನೊಂದು ಕಂಡಿತ್ತು. ಆ ಮೀನು ದೊಡ್ಡ ಹಡಗಿಗೆ ತಾಗಿ ಸತ್ತಿತ್ತೆಂದು ಅಂದಾಜಿಸಲಾಗಿದೆ. ಆಕೆ ನೀರಿಗೆ ಹಾರಿ ಆ ಮೀನನ್ನು ಇತರರ ಸಹಾಯದಿಂದ ದಂಡೆಗೆ ಎಳೆದು ತಂದಿದ್ದಳು.
ಆದರೆ ಅದಾಗಲೇ ಆ ಮೀನು ಕೊಳೆಯುವ ಸಾಧ್ಯತೆಯಿತ್ತು. ಸುಮಾರು 52 ಕೆಜಿ ತೂಕದ ಈ ಮೀನು ಕೆಜಿಗೆ ರೂ 6,200ರಂತೆ ಮಾರಾಟವಾಗಿ ಆಕೆಗೆ ಬರೋಬ್ಬರಿ ರೂ 3 ಲಕ್ಷ ದೊರಕಿದೆ.
ಭೋಲಾ ಮೀನು ಎಂದು ಗುರುತಿಸಲಾದ ಈ ಮೀನನ್ನು ತಿನ್ನುವುದಿಲ್ಲವಾದರೂ ಅದರ ಇತರ ಅಂಗಗಳಿಗೆ ಇತರ ದೇಶಗಳಲ್ಲಿ ಬೇಡಿಕೆಯಿದೆಯಲ್ಲದೆ ಅದರಲ್ಲಿ ಔಷಧೀಯ ಗುಣಗಳೂ ಇವೆಯೆಂದು ತಿಳಿಯಲಾಗಿದೆ.
ಈ ಮೀನು ಮಾರಾಟದಿಂದ ಈ ಮಹಿಳೆಯ ಬಡತನ ತಕ್ಕ ಮಟ್ಟಿಗೆ ನೀಗಿದೆ.