ಹತ್ರಸ್ ಸಂತ್ರಸ್ತೆಯ ಮನೆಗೆ ಹೋಗದಂತೆ ಪತ್ರಕರ್ತೆಯನ್ನು ತಡೆದ ಉ.ಪ್ರದೇಶ ಪೊಲೀಸರು
ವಿಡಿಯೋ ವೈರಲ್
ಹೊಸದಿಲ್ಲಿ: ದೇಶವನ್ನು ಬೆಚ್ಚಿಬೀಳಿಸಿರುವ ಹತ್ರಸ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಮನೆಗೆ ಹೋಗಿದ್ದ ಎಬಿಪಿ ನ್ಯೂಸ್ ಚಾನೆಲ್ ನ ಪತ್ರಕರ್ತೆಯನ್ನು ಪೊಲೀಸರು ತಡೆದ ಘಟನೆ ನಡೆದಿದೆ. ಪೊಲೀಸರು ಪತ್ರಕರ್ತೆಯನ್ನು ತಡೆಯುತ್ತಿರುವ ಮತ್ತು ಆಕೆಯನ್ನು ಪೊಲೀಸ್ ಜೀಪ್ ನಲ್ಲಿ ಕರೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪತ್ರಕರ್ತೆ ಪ್ರತಿಮಾ ಮಿಶ್ರಾ ಮತ್ತು ಕ್ಯಾಮರಾಮ್ಯಾನ್ ಮನೋಜ್ ಅಧಿಕಾರಿಯನ್ನು ಪೊಲೀಸರ ತಂಡ ತಡೆಯಿತು. ಇದೇ ಸಂದರ್ಭ ಗ್ರಾಮಕ್ಕೆ ಆಗಮಿಸಿದ್ದ ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒಬ್ರಿಯಾನ್, ಕಕೋಲಿ ಘೋಷ್ , ಪ್ರತಿಮಾ ಮೊಂಡಲ್ ಮತ್ತು ಮಮತಾ ಠಾಕೂರ್ ರನ್ನು ಕೂಡ ತಡೆಯಲಾಗಿತ್ತು.
ಪತ್ರಕರ್ತೆ ಅತ್ಯಾಚಾರ ಸಂತ್ರಸ್ತೆಯ ಮನೆಗೆ ತೆರಳಲು ಹೊರಟಾಗ ಪೊಲೀಸರು ತಡೆದರು. ಮುಖ್ಯ ರಸ್ತೆಯನ್ನು ಬ್ಯಾರಿಕೇಡ್ ಗಳನ್ನು ಹಾಕಿ ಮುಚ್ಚಿದ್ದರಿಂದ ಗದ್ದೆಯ ಮೂಲಕ ಪತ್ರಕರ್ತೆ ಸಾಗಿದರು. ಕೂಡಲೇ ಪೊಲೀಸರು ಅವರನ್ನು ತಡೆದರು ಮತ್ತು ಸಂತ್ರಸ್ತೆಯ ಮನೆಗೆ ತೆರಳಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು ಎಂದು ಆರೋಪಿಸಲಾಗಿದೆ.