‘ನಾವು ಭಾರೀ ಭಯ, ಒತ್ತಡದಲ್ಲಿ ಬದುಕುತ್ತಿದ್ದೇವೆ’ ಎಂದ ಹತ್ರಸ್ ಸಂತ್ರಸ್ತೆಯ ಕುಟುಂಬ: ವರದಿ
ಆರೋಪಿಗಳ ಕುಟುಂಬಸ್ಥರನ್ನು ಭೇಟಿಯಾಗುತ್ತಿರುವ ಜಿಲ್ಲಾಡಳಿತ: ಆರೋಪ
ಹೊಸದಿಲ್ಲಿ: 19 ವರ್ಷದ ದಲಿತ ಯುವತಿಯ ಅತ್ಯಾಚಾರ ಮತ್ತು ಸಾವಿನ ನಂತರ ಉತ್ತರ ಪ್ರದೇಶದ ಹತ್ರಸ್ ದೇಶಾದ್ಯಂತ ಸುದ್ದಿಯಾಗಿದೆ. ಅತ್ಯಾಚಾರ ಘಟನೆ ಬಳಿಕ ಮೃತಪಟ್ಟ ಯುವತಿಯ ಅಂತ್ಯಸಂಸ್ಕಾರವನ್ನು ಪೊಲೀಸರು ರಾತ್ರೋರಾತ್ರಿ ನಡೆಸಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ಇದಾದ ನಂತರ ಯುವತಿಯ ಗ್ರಾಮಕ್ಕೆ ಭೇಟಿ ನೀಡಲು ರಾಜಕಾರಣಿಗಳು ಮತ್ತು ಮಾಧ್ಯಮದವರಿಗೂ ಕೂಡ ಅವಕಾಶ ನಿರಾಕರಿಸಲಾಗಿತ್ತು. ಇದೀಗ ಯುವತಿಯ ಮನೆಯವರು ಮಾತನಾಡಿದ್ದು, ‘ನಾವು ಭಾರೀ ಒತ್ತಡ ಮತ್ತು ಭಯದಿಂದ ಬದುಕುತ್ತಿದ್ದೇವೆ’ ಎಂದಿದ್ದಾರೆ ಎಂದು indiatoday.in ವರದಿ ಮಾಡಿದೆ.
ಹತ್ರಸ್ ಜಿಲ್ಲಾಡಳಿತ ಆರೋಪಿಗಳ ಸಂಬಂಧಿಕರನ್ನು ಭೇಟಿಯಾಗಿ ‘ಹೆದರಬೇಡಿ, ನಿಮ್ಮ ಪುತ್ರರಿಗೆ ಏನೂ ಆಗುವುದಿಲ್ಲ” ಎಂದು ಹೇಳುತ್ತಿದ್ದಾರೆಂದು ಯುವತಿಯ ಮನೆಯವರು ಆರೋಪಿಸಿದ್ದಾಗಿ indiatoday.in ವರದಿ ತಿಳಿಸಿದೆ.
ಗ್ರಾಮದಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದರೂ ಮೇಲ್ಜಾತಿಯ ಕೆಲವು ಜನರು ಬೂಲ್ಘರಿ ಗ್ರಾಮದಲ್ಲಿ ಆರೋಪಿಗಳ ಪರವಾಗಿ ಪಂಚಾಯತ್ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಲು ಬಲವಂತಪಡಿಸಲಾಗುತ್ತಿದೆ ಎಂದು ಸಂತ್ರಸ್ತೆಯ ತಂದೆ ಗುರುವಾರ ಆರೋಪಿಸಿದ್ದರು.