“ಪತ್ರಕರ್ತರು ಹೋಗುತ್ತಾರೆ, ಇಲ್ಲಿ ಉಳಿಯುವವರು ನಾವು ಮಾತ್ರ”
ಹತ್ರಸ್ ಸಂತ್ರಸ್ತೆಯ ಕುಟುಂಬಸ್ಥರಿಗೆ ಹೇಳಿದ ಜಿಲ್ಲಾಧಿಕಾರಿ
ಹೊಸದಿಲ್ಲಿ, ಸೆ. 2: ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆಯ ತಂದೆಗೆ ಹಾಥರಸ್ ಜಿಲ್ಲಾ ದಂಡಾಧಿಕಾರಿ ಬೆದರಿಕೆ ಒಡ್ಡುತ್ತಿರುವುದನ್ನು ರಹಸ್ಯವಾಗಿ ಚಿತ್ರೀಕರಿಸಲಾದ ವೀಡಿಯೊ ಸೋರಿಕೆ ಆದ ಬಳಿಕ, ಕುಟುಂಬ ತನ್ನ ಹೇಳಿಕೆ ಬದಲಾಯಿಸುವಂತೆ ಜಿಲ್ಲಾಡಳಿತ ಒತ್ತಡ ಹೇರುವುದನ್ನು ಹೆಚ್ಚಿಸಿದೆ.
ಗುರುವಾರ ಸೋರಿಕೆಯಾಗಿರುವುದೆಂದು ಹೇಳಲಾಗುತ್ತಿರುವ ಹಾಥರಸ್ ಜಿಲ್ಲಾ ದಂಡಾಧಿಕಾರಿ ಪ್ರವೀಣ್ ಲೆಕ್ಸ್ಕರ್ ಸಂತ್ರಸ್ತೆಯ ಕುಟುಂಬದ ಮನೆಯಲ್ಲಿರುವುದನ್ನು ತೋರಿಸುವ ವೀಡಿಯೊವನ್ನು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದರು.
ರಹಸ್ಯವಾಗಿ ದಾಖಲಿಸಲಾದ ಈ ವೀಡಿಯೊದಲ್ಲಿ ಜಿಲ್ಲಾ ದಂಡಾಧಿಕಾರಿ ಲೆಕ್ಸ್ಕರ್ ಮನೆಯ ಒಳಗೆ ಕುಳಿತುಕೊಂಡಿರುವುದು ಹಾಗೂ ನಿಲುವು ಬದಲಿಸುವಂತೆ ಸಂತ್ರಸ್ತೆಯ ತಂದೆಗೆ ಸಲಹೆ ನೀಡುತ್ತಿರುವುದು ದಾಖಲಾಗಿದೆ. ‘‘ಅರ್ಧದಷ್ಟು ಪತ್ರಕರ್ತರು ಇಂದು ನಿರ್ಗಮಿಸಿದರು. ಇನ್ನು ಅರ್ಧದಷ್ಟು ಪತ್ರಕರ್ತರು ನಾಳೆ ನಿರ್ಗಮಿಸಲಿದ್ದಾರೆ. ನಾವು ಮಾತ್ರ ನಿಮ್ಮಾಂದಿಗೆ ಇರುತ್ತೇವೆ. ನಿಮ್ಮ ಹೇಳಿಕೆಯನ್ನು ಬದಲಿಸುತ್ತಿರೋ ಇಲ್ಲವೋ ಎಂಬುದು ನಿಮಗೆ ಬಿಟ್ಟದ್ದು’’ ಎಂದು ಲೆಕ್ಸ್ಕರ್ ಹೇಳುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ.