ಹತ್ರಸ್ ಪ್ರಕರಣ: ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡ ಪ್ರಿಯಾಂಕಾ ಗಾಂಧಿ
ಹೊಸದಿಲ್ಲಿ, ಅ. 2: ಉತ್ತರಪ್ರದೇಶದ ಹತ್ರಸ್ ನಲ್ಲಿ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ ದಲಿತ ಯುವತಿಗೆ ಶ್ರದ್ಧಾಂಜಲಿ ಅರ್ಪಿಸಲು ದಿಲ್ಲಿಯ ವಾಲ್ಮಿಕಿ ದೇವಾಲಯದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪ್ರಾರ್ಥನಾ ಸಭೆಯಲ್ಲಿ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪಾಲ್ಗೊಂಡರು.
‘‘ನಾವು ಶ್ರದ್ಧಾಂಜಲಿ ಸಲ್ಲಿಸಲು ಇಲ್ಲಿಗೆ ಆಗಮಿಸಿದ್ದೇವೆ. ಅದೆಲ್ಲದಕ್ಕಿಂತ ಮುಖ್ಯವಾಗಿ ಕುಟುಂಬಕ್ಕೆ ಹಾಗೂ ನಮ್ಮ ಸಹೋದರಿಗೆ ನ್ಯಾಯ ಒದಗಿಸಲು ಇಲ್ಲಿ ಸೇರಿದ್ದೇವೆ. ನಮಗೆ ನ್ಯಾಯ ಸಿಗುವ ವರೆಗೆ ಹೋರಾಟ ನಿಲ್ಲಿಸುವುದಿಲ್ಲ’’ ಎಂದು ಪ್ರಿಯಾಂಕಾ ಗಾಂಧಿ ಪ್ರಾರ್ಥನಾ ಸಭೆಯಲ್ಲಿ ಹೇಳಿದ್ದಾರೆ.
‘‘ಕುಟುಂಬಕ್ಕೆ ಸರಕಾರದಿಂದ ಯಾವುದೇ ನೆರವು ದೊರಕಿಲ್ಲ. ಅದಕ್ಕೆ ಬದಲಾಗಿ, ಚಿತೆಗೆ ಬೆಂಕಿ ಹಚ್ಚಲು ಕೂಡ ಕುಟುಂಬಕ್ಕೆ ಅವಕಾಶ ನೀಡಿಲ್ಲ. ತಂದೆ ಹಾಗೂ ಸಹೋದರ ಅಂತ್ಯಕ್ರಿಯೆಯ ವಿಧಿಗಳನ್ನು ನಡಸದೇ ಇರುವುದು ನಮ್ಮ ದೇಶದ ಸಂಸ್ಕೃತಿ ಅಲ್ಲ. ಸೂರ್ಯ ಮುಳುಗಿದ ಬಳಿಕ ಅಂತ್ಯಕ್ರಿಯೆ ನಡೆಸುವುದು ನಮ್ಮ ದೇಶದ ಸಂಪ್ರದಾಯ ಅಲ್ಲ’’ ಎಂದು ಅವರು ಹೇಳಿದ್ದಾರೆ.
ದೇವಾಲಯ ಟ್ರಸ್ಟ್ ಹತ್ರಸ್ ಸಂತ್ರಸ್ತೆಗೆ ಶ್ರದ್ಧಾಂಜಲಿ ಸಲ್ಲಿಸಲು ಈ ಪ್ರಾರ್ಥನಾ ಸಭೆ ಆಯೋಜಿಸಿತ್ತು.