ಹತ್ರಸ್ ಸಂತ್ರಸ್ತೆಯ ಕುಟುಂಬಕ್ಕೆ ವೈ ಪ್ಲಸ್ ಭದ್ರತೆ ನೀಡಿ: ಭೀಮ್ ಆರ್ಮಿ ಮುಖ್ಯಸ್ಥ ಆಝಾದ್ ಆಗ್ರಹ
ಹೊಸದಿಲ್ಲಿ/ಹತ್ರಸ್, ಅ.4: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಝಾದ್ ಉತ್ತರಪ್ರದೇಶದ ಹತ್ರಸ್ ನಲ್ಲಿ ನಡೆದಿದ್ದ ಅತ್ಯಾಚಾರ-ಚಿತ್ರಹಿಂಸೆಯಿಂದಾಗಿ ದಿಲ್ಲಿಯಲ್ಲಿ ಮೃತಪಟ್ಟಿರುವ 19ರ ಹರೆಯದ ದಲಿತ ಯುವತಿಯ ಕುಟುಂಬ ಸದಸ್ಯರನ್ನು ರವಿವಾರ ಸಂಜೆ ಭೇಟಿಯಾಗಿ ಸಾಂತ್ವಾನ ಹೇಳಿದರು. ಸಂತ್ರಸ್ತೆಯ ಕುಟುಂಬಕ್ಕೆ ವೈ ಪ್ಲಸ್ ಭದ್ರತೆ ನೀಡುವಂತೆ ಆದಿತ್ಯನಾಥ್ ಸರಕಾರವನ್ನು ಒತ್ತಾಯಿಸಿದ್ದಾರೆ.
ಹತ್ರಸ್ ಗೆ ತೆರಳುವ ಮಾರ್ಗ ಮಧ್ಯೆ ಪೊಲೀಸರು ಮೊದಲ ಬಾರಿ ತಡೆದ ಬಳಿಕ 5 ಕಿ.ಮೀ. ನಡೆದುಕೊಂಡ ಸಾಗಿದ ಆಝಾದ್ ಹತ್ರಸ್ ತಲುಪಿದ ತಕ್ಷಣ ಮತ್ತೊಮ್ಮೆ ಪೊಲೀಸರು ಅವರನ್ನು ತಡೆದಿದ್ದರು. ನಿಮ್ಮೊಂದಿಗೆ ಇರುವ ಎಲ್ಲರಿಗೂ ಯುವತಿಯ ಕುಟುಂಬವನ್ನು ಭೇಟಿಯಾಗಲು ಅವಕಾಶವಿಲ್ಲ ಇಲ್ಲ ಎಂದು ಹೇಳಿದ್ದರು.
ಯುವತಿಯ ಕುಟುಂಬ ಸದಸ್ಯರಿಗೆ ವೈ ಪ್ಲಸ್ ಭದ್ರತೆ ನೀಡುವಂತೆ ಬೇಡಿಕೆ ಇಟ್ಟಿರುವ ಆಝಾದ್, "ಚಲನಚಿತ್ರ ನಟಿ ಕಂಗಾನ ರಣಾವತ್ ಗೆ ವೈ ಪ್ಲಸ್ ಭದ್ರತೆ ನೀಡಬಹುದಾದರೆ.. ಆರೋಪಿಗಳ ಪರ ಸಭೆ ನಡೆಸುತ್ತಿರುವಾಗ ಸಂತ್ರಸ್ತೆಯ ಕುಟುಂಬಕ್ಕೂ ವೈ ಪ್ಲಸ್ ಭದ್ರತೆ ವ್ಯವಸ್ಥೆ ಮಾಡಬೇಕೆಂದು ನಾನು ಸರಕಾರವನ್ನು ಒತ್ತಾಯಿಸುತ್ತೇನೆ. ಸಿಬಿಐ ಸರಕಾರದ ಆದೇಶವನ್ನು ಪಾಲಿಸುತ್ತದೆ ಎನ್ನುವುದನ್ನು ನಾವೆಲ್ಲರೂ ನೋಡಿದ್ದೇವೆ. ಈಗಿನ ನಾಯಕತ್ವದಲ್ಲಿ ಸಿಬಿಐಯನ್ನು ಕೇವಲ ಬೆದರಿಸಲು ಮಾತ್ರ ಬಳಸಲಾಗುತ್ತಿದೆ. ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯುವುದನ್ನು ನಾವು ಬಯಸುತ್ತೇವೆ'' ಎಂದು ಆಝಾದ್ ಹೇಳಿದ್ದಾರೆ.