ಉ.ಪ್ರದೇಶ: ದಲಿತ ಬಾಲಕಿಯ ಛಿದ್ರಗೊಂಡ ಶವ ಪತ್ತೆ; ಅತ್ಯಾಚಾರವೆಸಗಿ ಹತ್ಯೆ - ಕುಟುಂಬದ ಆರೋಪ
ಲಕ್ನೊ,ಅ.4: ಉತ್ತರ ಪ್ರದೇಶದ ಹತ್ರಸ್ ಪ್ರಕರಣದ ವಿರುದ್ಧ ಪ್ರತಿಭಟನೆಗಳ ನಡುವೆಯೇ ರಾಜ್ಯದ ಕಾನ್ಪುರ ಗ್ರಾಮೀಣ ಜಿಲ್ಲೆಯ ಗಹೋಲಿಯಾ ರುರಾ ಗ್ರಾಮದಿಂದ ಸೆ.26ರಂದು ನಾಪತ್ತೆಯಾಗಿದ್ದ 15ರ ಹರೆಯದ ದಲಿತ ಬಾಲಕಿಯೋರ್ವಳ ಛಿದ್ರವಿಚ್ಛಿದ್ರ ಶವವು ಶುಕ್ರವಾರ ಮನೆಯಿಂದ ಸುಮಾರು 500 ಮೀ.ದೂರದ ಹೊಲವೊಂದರಲ್ಲಿ ಪತ್ತೆಯಾಗಿದೆ. ಶವವನ್ನು ಪ್ರಾಯಶಃ ಕಾಡುಪ್ರಾಣಿಗಳು ಭಾಗಶಃ ತಿಂದಿವೆ. ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ಇಬ್ಬರು ಚಿಕ್ಕಪ್ಪಂದಿರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯನ್ನು ಆರೋಪಿಗಳು ಅಪಹರಿಸಿ ಕೊಲೆ ಮಾಡಿದ್ದಾರೆ. ಆಸ್ತಿಯ ವಿವಾದದಲ್ಲಿ ಈ ಕೃತ್ಯ ನಡೆದಿದೆ ಎಂದು ಹೇಳಿದ ಎಸ್ಪಿ ಕೆ.ಕೆ.ಚೌಧರಿ,ಅತ್ಯಾಚಾರ ನಡೆದಿರುವ ಸಾಧ್ಯತೆಯನ್ನು ತಳ್ಳಿಹಾಕಿದರು. ಆರೋಪಿಗಳಾದ ಬ್ರಿಜ್ಲಾಲ (65) ಮತ್ತು ಜಿಯಾ ಲಾಲ (60) ಅವರನ್ನು ಬಂಧಿಸಲಾಗಿದ್ದು,ಆಸ್ತಿಯ ವಿವಾದದಲ್ಲಿ ಬಾಲಕಿಯ ಕೊಲೆ ಮಾಡಿರುವುದಾಗಿ ಅವರು ತಪ್ಪೊಪ್ಪಿಕೊಂಡಿದ್ದಾರೆ ಎಂದರು.
ಹೊಲದಲ್ಲಿ ಹರಡಿ ಬಿದ್ದಿದ್ದ ಬಾಲಕಿಯ ಶವದ ಅಂಗಾಂಗಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಲಾಗಿದ್ದು,ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ಕು ವರ್ಷ ಪ್ರಾಯದ ಬಾಲಕಿಯ ಅತ್ಯಾಚಾರ ತನ್ಮಧ್ಯೆ ರಾಜ್ಯದ ಅಲಿಗಡ ಜಿಲ್ಲೆಯ ಖೈರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ವರ್ಷ ಪ್ರಾಯದ ಎಳೆಯ ಬಾಲಕಿಯ ಮೇಲೆ ಆಕೆಯ ಸಂಬಂಧಿಯೋರ್ವ ಅತ್ಯಾಚಾರವೆಸಗಿದ್ದಾನೆ.
ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,ಆಕೆಯ ದೇಹಸ್ಥಿತಿ ಸ್ಥಿರವಾಗಿದೆ ಎಂದು ಎಸ್ಪಿ ಶುಭಂ ಪಟೇಲ್ ಅವರು ಸುದ್ದಿಗಾರರಿಗೆ ತಿಳಿಸಿದರು.