ಊಹಾಪೋಹಕ್ಕೆ ಕಾರಣವಾದ ಪ್ರಧಾನಿ ಮೋದಿ-ಜಗನ್ ರೆಡ್ಡಿ ಭೇಟಿ
ಹೈದರಾಬಾದ್: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಮಂಗಳವಾರ ದಿಲ್ಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಈ ಭೇಟಿಯು ವೈಎಸ್ ಆರ್ ಕಾಂಗ್ರೆಸ್ ಪಕ್ಷಯು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾ ಸತ್ತಾತ್ಮಕ ಒಕ್ಕೂಟಕ್ಕೆ(ಎನ್ ಡಿಎ)ಸೇರ್ಪಡೆಯಾಗಲಿದೆ ಎಂಬ ಊಹಾಪೋಹಕ್ಕೆ ಕಾರಣವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಸೆ.24, 24 ರಂದು ಭೇಟಿಯಾದ ಬಳಿಕ ಜಗನ್ ರೆಡ್ಡಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದಾರೆ.
ತನ್ನ ವಿರುದ್ಧದ ಸಿಬಿಐ ಪ್ರಕರಣಗಳಿಂದ ಬಚಾವಾಗಲು ರೆಡ್ಡಿ ಅವರು ಕೇಂದ್ರದೊಂದಿಗೆ ವ್ಯವಹಾರ ಕುದಿರಿಸುತ್ತಿದ್ದಾರೆ ಎಂದು ಚಂದ್ರಬಾಬು ನಾಯ್ಡು ನೇತೃತ್ವದ ರಾಜ್ಯ ವಿರೋಧ ಪಕ್ಷ ತೆಲುಗು ದೇಶಂ ಪಕ್ಷ ಆರೋಪಿಸಿದೆ.
ಶಿವಸೇನೆ ಹಾಗೂ ಶಿರೋಮಣಿ ಅಕಾಲಿದಳ ಎನ್ ಡಿಎ ಮೈತ್ರಿಕೂಟದಿಂದ ಹೊರ ನಡೆದಿರುವ ಕಾರಣ ಬಿಜೆಪಿ ಮತ್ತಷ್ಟು ಮೈತ್ರಿಪಕ್ಷಗಳ ಜೊತೆ ಕೈಜೋಡಿಸಲು ಬಯಸಿದೆ ಎಂಬ ವದಂತಿಯೂ ಇದೆ.
ಎನ್ ಡಿಎ ಸೇರ್ಪಡೆಯ ಯೋಜನೆಯನ್ನು ನಿರಾಕರಿಸಿದ ಜಗನ್ ರೆಡ್ಡಿಯವರ ವೈಎಸ್ ಆರ್ ಕಾಂಗ್ರೆಸ್, ರಾಜ್ಯವು ಕೊರೋನ ಬಿಕ್ಕಟ್ಟಿನಿಂದಾಗಿ ತೀವ್ರ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದು, ಈ ಸಮಯದಲ್ಲಿ ಕೇಂದ್ರದೊಂದಿಗೆ ಉತ್ತಮ ಸಂಬಂಧ ಮುಖ್ಯವಾಗುತ್ತದೆ ಎಂದಿದೆ.