ವಿಷ ನೀಡಿ ಯುವ ಪ್ರೇಮಿಗಳ ಹತ್ಯೆ
ದುರ್ಗ್ (ಛತ್ತೀಸ್ಗಢ): ಪರಸ್ಪರ ಪ್ರೇಮಿಸುತ್ತಿದ್ದ ಯುವ ಜೋಡಿಯನ್ನು ವಿಷಪ್ರಾಶನ ನೀಡಿ ಕೊಲೆ ಮಾಡಿದ ಶಂಕಿತ ಮರ್ಯಾದಾ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ಕೃಷ್ಣನಗರದ 21 ವರ್ಷ ವಯಸ್ಸಿನ ಶ್ರೀಹರಿ ಎಂಬಾತ ತನ್ನ ಸಹೋದರ ಸಂಬಂಧಿ ಯುವತಿ ಐಶ್ವರ್ಯಾ (20) ಎಂಬಾಕೆಯನ್ನು ಪ್ರೇಮಿಸುತ್ತಿದ್ದ ವಿಷಯ ತಿಳಿದು ಕುಟುಂಬ ಸದಸ್ಯರು ಇಬ್ಬರನ್ನೂ ವಿಷಪ್ರಾಶನ ಮಾಡಿಸಿ ಕೊಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಶನಿವಾರ ಈ ಘಟನೆ ನಡೆದಿದ್ದು, ಈ ಸಂಬಂಧ ಮೃತ ಯುವಕನ ಚಿಕ್ಕಪ್ಪ ರಾಮು ಹಾಗೂ ಯುವತಿಯ ಸಹೋದರ ಚರಣ್ ಎಂಬವರನ್ನು ಬಂಧಿಸಲಾಗಿದೆ" ಎಂದು ಭಿಲಾಯ್ ನಗರ ಸಿಎಸ್ಪಿ ಅಜಿತ್ ಯಾದವ್ ವಿವರಿಸಿದ್ದಾರೆ.
"ಕೃಷ್ಣನಗರದಲ್ಲಿ ಅಕ್ಕಪಕ್ಕದಲ್ಲಿ ವಾಸವಿದ್ದ ಶ್ರೀಹರಿ ಹಾಗೂ ಐಶ್ವರ್ಯ ಕಳೆದ ತಿಂಗಳು ಮನೆಯಿಂದ ಓಡಿಹೋಗಿದ್ದರು. ಈ ಬಗ್ಗೆ ಕುಟುಂಬದವರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇಬ್ಬರೂ ಚೆನ್ನೈನಲ್ಲಿ ಇರುವುದನ್ನು ಪೊಲೀಸರು ಪತ್ತೆ ಮಾಡಿದ್ದರು. ಅ. 7ರಂದು ಯುವಜೋಡಿಯನ್ನು ಕುಟುಂಬದವರ ವಶಕ್ಕೆ ಒಪ್ಪಿಸಲಾಗಿತ್ತು ಎಂದು ಹೇಳಿದ್ದಾರೆ.
"ಶನಿವಾರ ರಾತ್ರಿ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಈ ಮನೆಗಳಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಒಳಹೋಗಿ ತನಿಖೆ ನಡೆಸಿದಾಗ, ಯುವಜೋಡಿಗೆ ವಿಷಪ್ರಾಶನ ಮಾಡಿಸಿ ಅವರ ಸಾವಿಗೆ ಕಾರಣವಾದ್ದನ್ನು ಇಬ್ಬರು ಆರೋಪಿಗಳು ಒಪ್ಪಿಕೊಂಡಿದ್ದಾರೆ" ಎಂದು ಸ್ಪಷ್ಟಪಡಿಸಿದರು.
ಬಳಿಕ ಸುಪೇಲಾದಿಂದ 10 ಕಿಲೋಮೀಟರ್ ದೂರದ ಜೇವ್ರಾ ಸಿರ್ಸಾ ಗ್ರಾಮದ ಬಳಿ ಶಿವನಾಥ್ ನದಿ ದಂಡೆಯಲ್ಲಿ ಮೃತದೇಹಗಳನ್ನು ಸುಟ್ಟು ಹಾಕಿದ್ದಾಗಿ ಆರೋಪಿಗಳು ಹೇಳಿದ್ದಾರೆ. ಯುವಜೋಡಿಯ ವಿವಾಹಕ್ಕೆ ಕುಟುಂಬದವರ ಆಕ್ಷೇಪ ಇತ್ತು ಎಂದು ಆರೋಪಿಗಳು ಹೇಳಿದ್ದಾರೆ. ಭಾಗಶಃ ಸುಟ್ಟ ಮೃತದೇಹಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.