'ದೇಶದ್ರೋಹ ಕಾನೂನುಗಳನ್ನು ಆಯುಧವಾಗಿ ಬಳಸುವುದು ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತದೆ'
ಸುಪ್ರೀಂಕೋರ್ಟ್ ಮಾಜಿ ನ್ಯಾಯಾಧೀಶ ಮದನ್ ಲೋಕೂರ್
ಹೊಸದಿಲ್ಲಿ: ಮುಕ್ತ ಪತ್ರಿಕೋದ್ಯಮ ಹಾಗೂ ವಾಕ್ ಸ್ವಾತಂತ್ರ್ಯ ಕ್ಕೆ ಅಂಕುಶ ಹಾಕಲು ಕಾನೂನಿನ ದುರುಪಯೋಗ ಹಾಗೂ ಕಾನೂನಿನ ತಪ್ಪು ಬಳಕೆಯಾಗುತ್ತಿದೆ. ಮಾತನಾಡಲು ಧೈರ್ಯವಿರುವ ಎಲ್ಲರ ಮೇಲೆ ಪ್ರಭಾವ ಬೀರಲು ಅಧಿಕಾರಿಗಳು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಸುಪ್ರೀಂಕೋರ್ಟ್ ಮಾಜಿ ನ್ಯಾಯಾಧೀಶ ಮದನ್ ಬಿ. ಲೋಕೂರ್ ದೇಶದ್ರೋಹ ಕಾನೂನುಗಳನ್ನು ಆಯುಧವಾಗಿ ಬಳಸುವುದು ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತದೆ ಎಂದು ಅಭಿಪ್ರಾಯಪಟ್ಟರು.
ಮೀಡಿಯಾ ಫೌಂಡೇಶನ್ ಆಯೋಜಿಸಿರುವ ನಮ್ಮ ಮೂಲಭೂತ ಹಕ್ಕುಗಳನ್ನು ಸಂರಕ್ಷಿಸುವುದು ಹಾಗೂ ರಕ್ಷಿಸುವುದು-ವಾಕ್ ಸ್ವಾತಂತ್ರ್ಯ,ಅಭಿವ್ಯಕ್ತಿ ಹಾಗೂ ಪ್ರತಿಭಟನೆಯ ಹಕ್ಕುಕುರಿತು 2020ರ ಬಿಜಿ ವರ್ಗೀಸ್ ಸ್ಮಾರಕ ಉಪನ್ಯಾಸ ನೀಡುವಾಗ ನ್ಯಾಯಾಧೀಶ ಲೋಕೂರ್ ಈ ಹೇಳಿಕೆ ನೀಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಅಧಿಕಾರಿಗಳು ನಿರ್ಬಂಧಿತ ಆದೇಶಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇಂಟರ್ ನೆಟ್ ಸ್ಥಗಿತಗೊಳಿಸುತ್ತಿದ್ದಾರೆ ಹಾಗೂ ದೇಶದ್ರೋಹ ಕಾನೂನುಗಳನ್ನು ಆಯುಧವನ್ನಾಗಿಸುವ ವಿವಿಧ ಮಾರ್ಗಗಳನ್ನು ಕಂಡುಕೊಂಡಿದ್ದಾರೆ ಎಂದು ಸುಪ್ರೀಂಕೋರ್ಟ್ ನ ಮಾಜಿ ನ್ಯಾಯಾಧೀಶರು ಆರೋಪಿಸಿದ್ದಾರೆ.
ಸಿಆರ್ ಪಿಸಿಯ ಸೆಕ್ಷನ್ 144ನ್ನು ಹೇರುವುದು ಪತ್ರಿಕಾ ಸ್ವಾತಂತ್ರ್ಯದ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಅವರು ಆರೋಪಿಸಿದರು.