ಲಾಕ್ಡೌನ್ ಮುಗಿದಿರಬಹುದು,ಆದರೆ ಕೋವಿಡ್-19 ಈಗಲೂ ನಮ್ಮಂದಿಗಿದೆ
ರಾಷ್ಟ್ರವನ್ನುದ್ದೇಶಿಸಿ ಭಾಷಣದಲ್ಲಿ ಪ್ರಧಾನಿ ಮೋದಿ
ಹೊಸದಿಲ್ಲಿ,ಅ.20: ಲಾಕ್ಡೌನ್ ಮುಗಿದಿರಬಹುದು,ಆದರೆ ಕೋವಿಡ್-19 ಈಗಲೂ ನಮ್ಮೊಂದಿಗಿದೆ ಎನ್ನುವುದನ್ನು ಜನರು ಮರೆಯಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಸಂಜೆ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಕಳಕಳಿಯ ಮನವಿಯನ್ನು ಮಾಡಿಕೊಂಡರು.
ಜನತಾ ಕರ್ಫ್ಯೂದಿಂದ ಈವರೆಗಿನ ಪಯಣ ಸುದೀರ್ಘವಾಗಿದೆ. ಆರ್ಥಿಕ ಚಟುವಟಿಕೆಗಳೂ ಹೆಚ್ಚುತ್ತಿವೆ. ಹೆಚ್ಚಿನ ಜನರು ತಮ್ಮ ಮನೆಗಳಿಂದ ಹೊರಬರುತ್ತಿದ್ದಾರೆ. ಸಾಲುಸಾಲು ಹಬ್ಬಗಳೇ ಮುಂದಿದ್ದು,ಮಾರುಕಟ್ಟೆಗಳೂ ಜನರಿಂದ ತುಂಬಿವೆ.ಆದರೆ ಲಾಕ್ಡೌನ್ ಮುಗಿದಿರಬಹುದು,ಕೋವಿಡ್-19 ಈಗಲೂ ನಮ್ಮೊಂದಿಗಿದೆ ಎನ್ನುವುದನ್ನು ನಾವು ಮರೆಯಬಾರದು ಎಂದು ಮೋದಿ ನುಡಿದರು. ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ದೇಶದ ಸಾಧನೆಗಳನ್ನು ಪ್ರಮುಖವಾಗಿ ಬಿಂಬಿಸಿದ ಅವರು,ಆದರೆ ವಿಶ್ವದ ಇತರ ಭಾಗಗಳಲ್ಲಿ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂದರು.
ಜಾಗರೂಕರಾಗಿರುವಂತೆ ದೇಶದ ಜನತೆಗೆ ಸೂಚಿಸಿದ ಮೋದಿ,ನೀವು ಅಲಕ್ಷ ವಹಿಸಿದರೆ ಇತರರ ಜೀವಗಳನ್ನು ಅಪಾಯಕ್ಕೆ ತಳ್ಳಿದಂತಾಗುತ್ತದೆ ಎಂದರು.
ಕೊರೋನ ವೈರಸ್ಗೆ ಲಸಿಕೆ ಬರುವವರೆಗೂ ನೆಮ್ಮದಿಗೆ ಅವಕಾಶವಿಲ್ಲ ಎಂದ ಅವರು,ಕೋವಿಡ್-19 ಲಸಿಕೆಯನ್ನು ಅಭಿವೃದ್ಧಿಗೊಳಿಸಲು ಎಲ್ಲ ದೇಶಗಳು ಸಮರೋಪಾದಿಯಲ್ಲಿ ಶ್ರಮಿಸುತ್ತಿವೆ. ಲಸಿಕೆ ಲಭ್ಯವಾದ ಕೂಡಲೇ ಅದನ್ನು ಪ್ರತಿ ಭಾರತೀಯರಿಗೂ ದೊರಕುವಂತಾಗಲು ಸರಕಾರವು ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು.
‘ಎಚ್ಚರಿಕೆಯಿಂದಿರುವಂತೆ ನಿಮ್ಮೆಲ್ಲರನ್ನೂ ನಾನು ಪ್ರಾರ್ಥಿಸಿಕೊಳ್ಳುತ್ತೇನೆ. ನಿಮ್ಮೆಲ್ಲರನ್ನೂ ಸುರಕ್ಷಿತರಾಗಿ ಮತ್ತು ನಿಮ್ಮ ಕುಟುಂಬಗಳನ್ನು ಹರ್ಷಚಿತ್ತರಾಗಿ ನೋಡಲು ನಾನು ಬಯಸಿದ್ದೇನೆ. ಮುಂಬರುವ ಹಬ್ಬಗಳು ನಿಮ್ಮ ಬದುಕುಗಳಲ್ಲಿ ಸಂತೋಷವನ್ನು ತರುವುದನ್ನು ನಾನು ನೋಡಬಯಸಿದ್ದೇನೆ ’ಎಂದು ನುಡಿಯುವುದರೊಂದಿಗೆ ಪ್ರಧಾನಿ ತನ್ನ 12 ನಿಮಿಷಗಳ ಭಾಷಣವನ್ನು ಮುಗಿಸಿದರು.
ಮುಂಬರುವ ಹಬ್ಬಗಳ ಋತುವಿನಲ್ಲಿ ಜನರು ಮೈಮರೆತರೆ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಬಹುದು ಎಂದು ತಜ್ಞರು ಎಚ್ಚರಿಕೆ ನೀಡಿರುವ ಸಮಯದಲ್ಲಿ ಮೋದಿಯವರ ಈ ಭಾಷಣವು ದೇಶದಲ್ಲಿ ಕೋವಿಡ್-19 ಪಿಡುಗು ಕಾಣಿಸಿಕೊಂಡಾಗಿನಿಂದ ಅವರು ದೇಶವನ್ನುದ್ದೇಶಿಸಿ ಮಾಡಿರುವ ಏಳನೆಯ ಭಾಷಣವಾಗಿದೆ.
ಪ್ರಧಾನಿ ಭಾಷಣದ ಮುಖ್ಯಾಂಶಗಳು
* ಈ ಹಬ್ಬಗಳ ಋತುವಿನಲ್ಲಿ ಮಾರುಕಟ್ಟೆಗಳು ಮತ್ತೊಮ್ಮೆ ಕಳೆಗಟ್ಟಿವೆ,ಆದರೆ ಲಾಕಡೌನ್ ಮುಗಿದಿರಬಹುದಾದರೂ ಕೊರೋನ ವೈರಸ್ ದೇಶದಿಂದ ತೊಲಗಿಲ್ಲ ಎನ್ನುವುದನ್ನು ನಾವು ನೆನಪಿಟ್ಟುಕೊಳ್ಳುವ ಅಗತ್ಯವಿದೆ.
* ನಮ್ಮ ಜವಾಬ್ದಾರಿಗಳನ್ನು ನಿಭಾಯಿಸಲು,ಬದುಕಿಗೆ ಮತ್ತೆ ಚುರುಕು ನೀಡಲು ನಮ್ಮಲ್ಲಿ ಹೆಚ್ಚಿನವರು ಪ್ರತಿ ದಿನ ಮನೆಗಳಿಂದ ಹೊರಬೀಳುತ್ತಿದ್ದೇವೆ. ಹಬ್ಬಗಳ ಋತುವಿನ ಸಂಭ್ರಮವೂ ನಿಧಾನವಾಗಿ ಮಾರುಕಟ್ಟೆಗಳಿಗೆ ಮರಳುತ್ತಿದೆ.
* ಕಳೆದ ಏಳೆಂಟು ತಿಂಗಳುಗಳಲ್ಲಿ ಪ್ರತಿಯೊಬ್ಬ ಭಾರತೀಯನ ಪ್ರಯತ್ನಗಳಿಂದಾಗಿ ದೇಶದಲ್ಲಿಯ ಸ್ಥಿತಿ ಸುಧಾರಿಸಿದೆ. ಅದು ಮತ್ತೆ ಹದಗೆಡಲು ನಾವು ಅವಕಾಶ ನೀಡಬಾರದು.
* ಇದು ಹಬ್ಬಗಳ ಮತ್ತು ಸಂಭ್ರಮದ ಸಮಯ. ಸಣ್ಣ ನಿರ್ಲಕ್ಷ್ಯವೂ ಕೂಡ ನಮ್ಮನ್ನು ದುಃಖದಲ್ಲಿ ತಳ್ಳಬಹುದು.
* ದೇಶದಲ್ಲಿಂದು ಚೇತರಿಕೆ ದರ ಚೆನ್ನಾಗಿದೆ. ಸಾವಿನ ದರವು ಕಡಿಮೆಯಿದೆ.
* ಭಾರತದಲ್ಲಿ ಸಾವುಗಳ ಸಂಖ್ಯೆ ಪ್ರತಿ 10 ಲಕ್ಷ ಜನಸಂಖ್ಯೆಗೆ 83 ಆಗಿದ್ದರೆ ಅಮೆರಿಕ, ಬ್ರೆಝಿಲ್,ಸ್ಪೇನ್ ಮತ್ತು ಬ್ರಿಟನ್ನಂತಹ ದೇಶಗಳಲ್ಲಿ ಇದು 600ಕ್ಕೂ ಅಧಿಕವಾಗಿದೆ.
* ಇತ್ತೀಚಿಗೆ ನಾವು ಹಲವಾರು ಚಿತ್ರಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಿದ್ದು,ಜನರು ಹೆಚ್ಚಿನ ಕಾಳಜಿ ವಹಿಸುತ್ತಿಲ್ಲ ಎನ್ನುವುದನ್ನು ಅವು ಸ್ಪಷ್ಟವಾಗಿ ತೋರಿಸುತ್ತಿವೆ. ಇದು ಸರಿಯಲ್ಲ. ನೀವು ಮಾಸ್ಕ್ ಧರಿಸದೆ ಮನೆಯಿಂದ ಹೊರಬಿದ್ದರೆ ನೀವು ನಿಮ್ಮ ಕುಟುಂಬಗಳನ್ನು ಅಪಾಯಕ್ಕೆ ತಳ್ಳುತ್ತಿದ್ದೀರಿ. ಅಮೆರಿಕ ಅಥವಾ ಯುರೋಪ್ ಆಗಿರಲಿ,ಪ್ರಕರಣಗಳು ಕಡಿಮೆಯಾಗಿದ್ದವು ಮತ್ತು ಈಗ ಏಕಾಏಕಿ ಹೆಚ್ಚುತ್ತಿವೆ ಎನ್ನುವುದನ್ನು ನಾವು ಮರೆಯಬಾರದು.
* ನಮಗೆ ಲಸಿಕೆ ಲಭ್ಯವಾಗುವವರೆಗೂ ಕೊರೋನ ವೈರಸ್ ವಿರುದ್ಧ ನಮ್ಮ ಹೋರಾಟ ದುರ್ಬಲಗೊಳ್ಳಬಾರದು.
* ಭಾರತವು ಕೋವಿಡ್-19 ರೋಗಿಗಳಿಗಾಗಿ 90 ಲಕ್ಷಕ್ಕೂ ಹೆಚ್ಚು ಹಾಸಿಗೆಗಳ ಸೌಲಭ್ಯವನ್ನು ಹೊಂದಿದೆ. 12,000 ಕ್ವಾರಂಟೈನ್ ಕೇಂದ್ರಗಳು,ಸುಮಾರು 2,000 ಕೋವಿಡ್-19 ತಪಾಸಣಾ ಲ್ಯಾಬ್ಗಳಿವೆ. ಪರೀಕ್ಷೆಗಳ ಸಂಖ್ಯೆ ಶೀಘ್ರವೇ 10 ಕೋಟಿಯನ್ನು ದಾಟಲಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಪರೀಕ್ಷೆಗಳ ಸಂಖ್ಯೆಯಲ್ಲಿ ಏರಿಕೆ ನಮ್ಮ ಬಲವಾಗಿದೆ.
* ಕೊರೋನ ವೈರಸ್ ಲಸಿಕೆ ಬಿಡುಗಡೆಗೊಂಡಾಗ ಅದು ಪ್ರತಿ ಭಾರತೀಯರಿಗೂ ತಲುಪುವಂತೆ ಮಾಡಲು ಸರಕಾರವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ.