ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ಪಂಜಾಬ್ ವಿಧಾನ ಸಭೆಯಲ್ಲಿ ನಿರ್ಣಯ ಅಂಗೀಕಾರ
ಚಂಡಿಗಢ, ಅ. 18: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜಾರಿಗೆ ತಂದಿರುವ ವಿವಾದಾತ್ಮಕ ಮೂರು ನೂತನ ಕೃಷಿ ಕಾಯ್ದೆ ತಿರಸ್ಕರಿಸಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮಂಗಳವಾರ ರಾಜ್ಯ ವಿಧಾನ ಸಭೆಯಲ್ಲಿ ನಿರ್ಣಯ ಅಂಗೀಕರಿಸಿದರು. ಕೇಂದ್ರ ಸರಕಾರದ ಕೃಷಿ ಕಾಯ್ದೆಗೆ ಪ್ರತಿಯಾಗಿ ಮುಖ್ಯಮಂತ್ರಿ ರೈತರ ಉತ್ಪಾದನೆ ಸುಲಭಗೊಳಿಸುವ ತಿದ್ದುಪಡಿ ಕಾಯ್ದೆ, ಅವಶ್ಯಕ ಸಾಮಗ್ರಿಗಳ ತಿದ್ದುಪಡಿ ಕಾಯ್ದೆ ರೈತರ ಒಪ್ಪಂದ ಹಾಗೂ ಕೃಷಿ ಸೇವಾ ತಿದ್ದುಪಡಿ ಕಾಯ್ದೆಯನ್ನು ಪರಿಚಯಿಸಿದರು. ಸದನದಲ್ಲಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಸಿಂಗ್, ಕೃಷಿ ರಾಜ್ಯಕ್ಕೆ ಸಂಬಂಧಿಸಿದ ವಿಷಯ. ಆದರೆ, ಕೇಂದ್ರ ಸರಕಾರ ಇದನ್ನು ನಿರ್ಲಕ್ಷಿಸಿದೆ. ಭಾರತ ಸರಕಾರ ಏನು ಮಾಡಲು ಬಯಸುತ್ತಿದೆ ಎಂದು ನನಗೆ ತಿಳಿಯುತ್ತಿಲ್ಲ ಎಂದು ಹೇಳಿದರು.
ಕೃಷಿ ಕಾಯ್ದೆ ಸಂವಿಧಾನಕ್ಕೆ ವಿರುದ್ಧವಾದುದು. ಸಂವಿಧಾನದಲ್ಲಿ ಕೃಷಿ ರಾಜ್ಯಕ್ಕೆ ಸಂಬಂಧಿಸಿದ ವಿಷಯ ಎಂದು ಹೇಳಲಾಗಿದೆ. ಕೇಂದ್ರ ಸರಕಾರ ಜಾರಿಗೆ ತಂದ ಕಾಯ್ದೆ ಸಂವಿಧಾನ ನೀಡಿದ ರಾಜ್ಯದ ಕಾರ್ಯನಿರ್ವಹಣೆ ಹಾಗೂ ಅಧಿಕಾರದ ಮೇಲಿನ ನೇರ ದಾಳಿ ಎಂದು ಅವರು ಹೇಳಿದ್ದಾರೆ.