ಟಿಆರ್ಪಿ ಹಗರಣಕ್ಕೆ ಸಂಬಂಧಿಸಿದ ಸುದ್ದಿ ಪ್ರಸಾರಕ್ಕೆ ತಡೆ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ ಮಾಜಿ ಎಸಿಪಿ
(ಉತ್ತರಪ್ರದೇಶ), ಅ. 20: ರಿಪಬ್ಲಿಕ್ ಟಿವಿ ಹಾಗೂ ಅದರ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರು ಟಿಆರ್ಪಿ ಹಗರಣಕ್ಕೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ನೀಡುವಂತೆ ಕೋರಿ ಮಾಜಿ ಪೊಲೀಸ್ ಉಪ ಆಯುಕ್ತ (ಎಸಿಪಿ)ಇಕ್ಬಾಲ್ ಶೇಖ್ ನಗರ ಸಿವಿಲ್ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದಾರೆ. ಟಿಆರ್ಪಿ ಹಗರಣಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆಯ ವಿರುದ್ಧ ಟೀಕೆ ಮಾಡುತ್ತಿರುವ ಚಾನೆಲ್ ಹಾಗೂ ಗೋಸ್ವಾಮಿ ವಿರುದ್ಧ ಇಕ್ಬಾಲ್ ಶೇಕ್ ಅವರು ಮಾನನಷ್ಟ ಮೊಕದ್ದಮೆಯನ್ನು ಕೂಡ ದಾಖಲಿಸಿದ್ದಾರೆ. ಈ ಮನವಿಯ ವಿಚಾರಣೆ ಬುಧವಾರ ನಡೆಯಲಿದೆ.
‘‘ಶಾಸನಬದ್ಧ ನಿಯಮಗಳ ಪ್ರಕಾರ ಪ್ರಕರಣದ ತನಿಖೆ ನಡೆಯುತ್ತಿರುವಾಗ, ಈ ಬಗ್ಗೆ ಟಿ.ವಿ. ಚಾನೆಲ್ನಲ್ಲಿ ಚರ್ಚೆ ನಡೆಸುವ ಸ್ವಾತಂತ್ರ ಹಾಗೂ ಮುಂಬೈ ಪೊಲೀಸರನ್ನು ಅಗೌರವಿಸುವ ಮೂಲಕ ತೀರ್ಮಾನ ನೀಡುವ ಅವಕಾಶವನ್ನು ಅರ್ನಬ್ ಗೋಸ್ವಾಮಿ ಅವರಿಗೆ ನೀಡಬಾರದು ಎಂದು ವಕೀಲ ಅಭಾ ಸಿಂಗ್ ಮೂಲಕ ನೀಡಿದ ದೂರಿನಲ್ಲಿ ಇಕ್ಬಾಲ್ ಶೇಖ್ ಹೇಳಿದ್ದಾರೆ. ಅರ್ನಬ್ ಗೋಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿ ಟಿ.ವಿ.ಯಲ್ಲಿ ಚರ್ಚೆ ನಡೆಸುತ್ತಿದ್ದಾರೆ ಹಾಗೂ ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಇದು ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಶೇಖ್ ಆರೋಪಿಸಿದ್ದಾರೆ.