ಪ್ರತಿಪಕ್ಷಗಳು ಜಮ್ಮು-ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ಮರುಸ್ಥಾಪಿಸಲು ಬಯಸುತ್ತಿವೆ: ಪ್ರಧಾನಿ ಮೋದಿ
ಸಸರಾಮ್(ಬಿಹಾರ): ಮುಂದಿನ ವಾರ ವಿಧಾನಸಭಾ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಶುಕ್ರವಾರ ಮೊದಲ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ 370 ವಿಧಿಯನ್ನು ರದ್ದುಪಡಿಸಿರುವ ತನ್ನ ಸರಕಾರದ ಕ್ರಮದ ಬಗ್ಗೆ ವ್ಯಕ್ತವಾಗಿರುವ ಟೀಕೆಯನ್ನು ಉಲ್ಲೇಖಿಸಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
"370ನೇ ವಿಧಿ ರದ್ದುಗೊಳ್ಳಲು ಎಲ್ಲರೂ ಕಾಯುತ್ತಿದ್ದರು. ಆದರೆ, ತಾವು ಅಧಿಕಾರಕ್ಕೆ ಬಂದರೆ ಕೇಂದ್ರ ಸರಕಾರದ ನಿರ್ಧಾರವನ್ನು ರದ್ದುಪಡಿಸುವುದಾಗಿ ಪ್ರತಿಪಕ್ಷಗಳು ಹೇಳುತ್ತಿವೆ'' ಎಂದು ಚುನಾವನಾ ರ್ಯಾಲಿಯಲ್ಲಿ ಮೋದಿ ಹೇಳಿದರು.
"ಎನ್ಡಿಎ ಸರಕಾರವು 370ನೇ ವಿಧಿಯನ್ನು ರದ್ದುಪಡಿಸಿತು. ಈ ಜನರು(ಪ್ರತಿಪಕ್ಷ)ತಾವು ಅಧಿಕಾರಕ್ಕೆ ಬಂದರೆ ಸ್ಥಾನಮಾನವನ್ನು ಮರಳಿ ಸ್ಥಾಪಿಸುತ್ತೇವೆ ಎಂದು ಹೇಳುತ್ತಾರೆ. ಇಂತಹ ಹೇಳಿಕೆಯನ್ನು ನೀಡಿದ ನಂತರ ಅವರಿಗೆ ಬಿಹಾರದಲ್ಲಿ ಮತ ಕೇಳುವ ಧೈರ್ಯವಿದೆಯೇ? ಇದು ಬಿಹಾರಕ್ಕೆ ಅವಮಾನವಲ್ಲವೇ? ಈ ರಾಜ್ಯವು ದೇಶವನ್ನು ರಕ್ಷಿಸಲು ತನ್ನ ಮಗ ಹಾಗೂ ಮಗಳನ್ನು ಗಡಿಗೆ ಕಳುಹಿಸುತ್ತಿದೆ'' ಎಂದು ಮೋದಿ ಹೇಳಿದರು.