ಕಾಶ್ಮೀರ ವಿಷಯ ಕೈಬಿಟ್ಟಿದ್ದೇವೆ ಎಂದು ಭಾವಿಸುವುದು ತಪ್ಪು: ಮೆಹಬೂಬಾ ಮುಫ್ತಿ
ಶ್ರೀನಗರ, ಅ. 23: ತನ್ನ ಪಕ್ಷ ರಾಜ್ಯ ಧ್ವಜವನ್ನು ಹಿಂದೆ ತರಲು ಹೋರಾಟ ಮುಂದುವರಿಸಲಿದೆ ಹಾಗೂ ವಿಶೇಷ ಸ್ಥಾನ ಮಾನಕ್ಕಾಗಿ ಕಾಶ್ಮೀರದ ಹೋರಾಟವನ್ನು ಕೈ ಬಿಡುವುದಿಲ್ಲ ಎಂದು ಪಿಡಿಪಿ ವರಿಷ್ಠೆ ಮೆಹಬೂಬಾ ಮುಪ್ತಿ ಶುಕ್ರವಾರ ಹೇಳಿದ್ದಾರೆ.
ನಾವು ಕಾಶ್ಮೀರ ವಿಷಯವನ್ನು ಕೈ ಬಿಟ್ಟಿದ್ದೇವೆ ಎಂದು ಯಾರಾದರೂ ಭಾವಿಸಿದರೆ ಅದು ತಪ್ಪು’’ ಎಂದು ಅವರು ನುಡಿದಿದ್ದಾರೆ. ‘‘ದರೋಡೆಕೋರ ಪ್ರಬಲನಾಗಿರಬಹುದು. ಆದರೆ, ಆತ ಕಳವುಗೈದ ವಸ್ತುವನ್ನು ಹಿಂದಿರುಗಿಸಬೇಕು. ಅವರು ಸಂವಿಧಾನವನ್ನು ನಾಶ ಮಾಡಿರಬಹುದು...ವಿಶೇಷ ಸ್ಥಾನಮಾನ ಹಿಂದೆ ತೆಗೆಯಲು ಸಂಸತ್ತಿಗೆ ಅಧಿಕಾರ ಇಲ್ಲ. ಸರ್ವಾಧಿಕಾರ ದೀರ್ಘ ಕಾಲ ಮುಂದುವರಿಯುವುದಿಲ್ಲ’’ ಎಂದು ಅವರು ಹೇಳಿದ್ದಾರೆ.
ಕಾಶ್ಮೀರ ವಿಷಯಕ್ಕೆ ಸಂಬಂಧಿಸಿ ಒಂದು ವೇಳೆ ನಾಯಕರು ರಕ್ತ ಚೆಲ್ಲಬೇಕಾದ ಅಗತ್ಯ ಬಂದರೆ, ಮೆಹಬೂಬಾ ಮುಪ್ತಿ ಅವರು ಮೊದಲು ರಕ್ತ ಚೆಲ್ಲಲಿದ್ದಾರೆ ಎಂದು ಹೇಳಿದ ಅವರು, ಪ್ರಸಕ್ತ ಭಾರತದಲ್ಲಿ ನಾವು ಆರಾಮವಾಗಿಲ್ಲ ಎಂದರು. ತನ್ನ ಬಂಧನದ ಬಗ್ಗೆ ಮಾತನಾಡಿದ ಅವರು, ಪಿಡಿಪಿ ಕಥೆ ಮುಗಿಯಿತು ಎಂದು ನಾನು ಜೈಲಿನಲ್ಲಿ ಇರುವಾಗ ಭಾವಿಸಿದ್ದೆ. ಆದರೆ, ಜೈಲಿನಿಂದ ಹೊರಬಂದ ಬಳಿಕ ಪಕ್ಷ ಹಾಗೆ ಇರುವುದನ್ನು ಕಂಡು ಕೊಂಡಿದ್ದೇನೆ ಎಂದು ಮುಫ್ತಿ ಹೇಳಿದರು.