ಮತಾಂತರಗೊಂಡಿಲ್ಲ ಎಂದು ಹೇಳುವಂತೆ ಪೊಲೀಸರಿಂದ ಬಲವಂತ: ಗಾಝಿಯಾಬಾದ್ ವಾಲ್ಮೀಕಿ ಸಮುದಾಯದ ಜನರ ಆರೋಪ
ಸಾಂದರ್ಭಿಕ ಚಿತ್ರ
ಗಾಝಿಯಾಬಾದ್, ಅ. 23: ಗಾಝಿಯಾಬಾದ್ನ ಕರೇರಾ ಗ್ರಾಮದಲ್ಲಿ 236 ವಾಲ್ಮೀಕಿ ಸಮುದಾಯದ ಜನರು ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಬಳಿಕ ‘ಅಂತಹ ಯಾವುದೇ ಮತಾಂತರ ನಡೆದಿಲ್ಲ’ ಎಂದು ಕ್ಯಾಮರಾದ ಮುಂದೆ ಹೇಳಿಕೆ ನೀಡುವಂತೆ ಸ್ಥಳೀಯ ಪೊಲೀಸರು ಒತ್ತಡ ಹೇರುತ್ತಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ.
ಅಕ್ಟೋಬರ್ 14ರಂದು ನಡೆದ ಸಾಮಾಹಿಕ ಮತಾಂತರ ಕಾರ್ಯಕ್ರಮದ ಆಯೋಜಕ ರಲ್ಲಿ ಓರ್ವರಾದ ಪವನ್, ತನ್ನನ್ನು ಮಂಗಳವಾರ ರಾತ್ರಿ ಗಾಝಿಯಾಬಾದ್ನಲ್ಲಿರುವ ಸೈದಾಬಾದ್ ಪೊಲೀಸ್ ಠಾಣೆಗೆ ಪೊಲೀಸರು ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ಆರೋಪಿಸಿದ್ದಾರೆ.
‘‘ನನ್ನನ್ನು ಪೊಲೀಸ್ ಠಾಣೆಗೆ ಬಲವಂತವಾಗಿ ಕರೆದೊಯ್ಯಲಾಯಿತು. ರಾಜರತ್ನ ಅಂಬೇಡ್ಕರ್ ಅವರು ಸಭೆಯಲ್ಲಿ ಪಾಲ್ಗೊಳ್ಳಲು ಮಾತ್ರ ಆಗಮಿಸಿದ್ದರು. ಯಾವುದೇ ಮತಾಂತರ ನಡೆದಿಲ್ಲ ಎಂದು ಕ್ಯಾಮರಾದ ಮುಂದೆ ಹೇಳುವಂತೆ, ಮತಾಂತರದ ಸುದ್ದಿ ನಕಲಿ ಹಾಗೂ ವದಂತಿ ಎಂದು ಒಪ್ಪಿಕೊಳ್ಳುವಂತೆ ಉಪ ವಿಭಾಗೀಯ ದಂಡಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಒತ್ತಡ ಹೇರಿದ್ದರು’’ ಎಂದು 27 ವರ್ಷದ ಪವನ್ ಹೇಳಿದ್ದಾರೆ. ‘‘ತಾನು ಅಂತಹ ಯಾವುದೇ ಹೇಳಿಕೆ ನೀಡಲು ನಿರಾಕರಿಸಿದೆ. ನನ್ನೊಂದಿಗೆ ಮತಾಂತರಗೊಂಡ ಪೂರ್ಣ ಗುಂಪು ಪೊಲೀಸ್ ಠಾಣೆಗೆ ಆಗಮಿಸಿತ್ತು ಹಾಗೂ ಅಧಿಕಾರಿಗಳಿಗೆ ವಿಷಯ ಬಗ್ಗೆ ಮನವರಿಕೆ ಮಾಡಿತು. ಇದರಿಂದ ನಾನು ಪೊಲೀಸ್ ಠಾಣೆಯಿಂದ ಹೊರಬರಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ. ‘‘ಆದರೆ, ಕಚೇರಿಯಲ್ಲಿ ಸಂಜೆ ಭೇಟಿಯಾಗುವಂತೆ ಕೌನ್ಸಿಲರ್ ಹಾಗೂ ಉಪ ವಿಭಾಗೀಯ ದಂಡಾಧಿಕಾರಿ ಸೂಚಿಸಿದ್ದಾರೆ. ಅದು ಯಾಕೆ ಎಂದು ನನಗೆ ತಿಳಿದಿಲ್ಲ. ನನಗೆ ಅಭದ್ರತೆ ಭಾವನೆ ಉಂಟಾಯಿತು. ಆದುದರಿಂದ ಬುಧವಾರ ಅವರನ್ನು ಭೇಟಿಯಾಗಲು ಹೋಗಿಲ್ಲ’’ ಎಂದು ಪವನ್ ಹೇಳಿದ್ದಾರೆ. ಪವನ್ ಅವರ ಆರೋಪವನ್ನು ಸೈದಾಬಾದ್ ಪೊಲೀಸ್ ಠಾಣೆಯ ಅಧಿಕಾರಿ ವಿಷ್ಣು ಕೌಶಿಕ್ ನಿರಾಕರಿಸಿದ್ದಾರೆ. ಈ ನಡುವೆ ಗ್ರಾಮದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಷ್ಣು ಕೌಶಿಕ್ ‘‘ಜನರ ಸುರಕ್ಷೆಗೆ ಪೊಲೀಸರನ್ನು ನಿಯೋಜಿಸಲಾಗಿದೆ’’ ಎಂದಿದ್ದಾರೆ. ಮೋಂಟು ವಾಲ್ಮೀಕಿ ಎಂಬಾತ ಸಲ್ಲಿಸಿದ ದೂರಿನ ಆಧಾರದಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಆದರೆ, ಮೋಂಟು ಈ ಗ್ರಾಮದಲ್ಲಿ ವಾಸಿಸುತ್ತಿಲ್ಲ ಹಾಗೂ ಆತನಿಗೆ ಈ ಗ್ರಾಮದೊಂದಿಗೆ ಯಾವುದೇ ಸಂಬಂಧ ಇಲ್ಲ ಎಂದು ಕರೇರಾದ ವಾಲ್ಮೀಕಿ ಸಮುದಾಯದ ಸದಸ್ಯರು ಹೇಳಿದ್ದಾರೆ. ‘‘ಗ್ರಾಮದಲ್ಲಿ ಜಾತಿ ಆಧಾರಿತ ಹಿಂಸಾಚಾರ ಹರಡಲು ಮತಾಂತರದ ವದಂತಿ ಹಬ್ಬಿಸಲಾಗಿದೆ. ಮತಾಂತರದ ಪ್ರಮಾಣ ಪತ್ರಗಳಲ್ಲಿ ಯಾವುದೇ ಹೆಸರಿಲ್ಲ, ಅಧಿಕೃತ ಸಹಿ ಅಥವಾ ನೋಂದಣಿ ಸಂಖ್ಯೆ ಇಲ್ಲ. ಈ ಪ್ರಮಾಣ ಪತ್ರಗಳನ್ನು ಸುಲಭವಾಗಿ ನಕಲಿ ಮಾಡಬಹುದು’’ ಎಂದು ಪ್ರಥಮ ಮಾಹಿತಿ ವರದಿಯಲ್ಲಿ ಹೇಳಲಾಗಿದೆ. ‘‘ನಾವು ದೂರು ದಾಖಲಿಸಿಕೊಂಡಿದ್ದೇವೆ. ತನಿಖೆ ನಡೆಸಲಿದ್ದೇವೆ. ಇದುವರೆಗೆ ಯಾರನ್ನೂ ಬಂಧಿಸಿಲ್ಲ’’ ಎಂದು ಕೌಶಿಕ್ ಹೇಳಿದ್ದಾರೆ. ಈ ಬಗ್ಗೆ ಗಾಝಿಯಾಬಾದ್ನ ಉಪ ವಿಭಾಗೀಯ ದಂಡಾಧಿಕಾರಿ ಡಿ.ಪಿ. ಸಿಂಗ್ ಅವರನ್ನು ಫೋನ್ ಮೂಲಕ ಸಂಪರ್ಕಿಸಿತು. ಆದರೆ, ಅವರು ತಾನು ಮೊಬೈಲ್ ನೆಟ್ವರ್ಕ್ ಸರಿಯಾಗಿ ಇಲ್ಲದ ಪ್ರದೇಶದಲ್ಲಿ ಇದ್ದೇನೆ. ಅನಂತರ ಕರೆ ಮಾಡುವುದಾಗಿ ತಿಳಿಸಿದ್ದಾರೆ. ಸ್ಥಳೀಯ ನಗರ ನಿಗಮದ ಕೌನ್ಸಿಲರ್ ವಿಜೇಂದ್ರ ಚೌಹಾಣ್, ‘‘ನಾನು ಕಾಲನಿಯ ಪ್ರತಿ ಮನೆಗೆ ತೆರಳಿ ಜನರನ್ನು ಭೇಟಿಯಾಗಿದ್ದೇನೆ. ನಾವು ಮತಾಂತರಗೊಂಡಿದ್ದೇವೆ ಎಂದು ಯಾರೊಬ್ಬರೂ ಪ್ರತಿಪಾದಿಸಿಲ್ಲ. ನಾವು ಹಂದಿ ಕಸಾಯಿ ಮಾಡುವ ವಂಶ. ಆದುದರಿಂದ ಇತರ ಧರ್ಮವನ್ನು ಸ್ವೀಕರಿಸಲಾರೆವು ಎಂದು ಅವರು ಹೇಳಿದ್ದಾರೆ’’ ಎಂದಿದ್ದಾರೆ. ‘‘ಧಾರ್ಮಿಕ ಮತಾಂತರದ ವರದಿ ತಪ್ಪು. ರಾಜರತ್ನ ಅಂಬೇಡ್ಕರ್ ಆಗಮಿಸಿ ಕೆಲವು ಫೋಟೊ ಹಾಗೂ ಪುಸ್ತಕಗಳನ್ನು ಹಂಚಿಕೊಂಡಿರುವ ಸಾಧ್ಯತೆ ಇದೆ. ಆದರೆ, ಯಾವುದೇ ಮತಾಂತರ ನಡೆದಿಲ್ಲ’’ ಎಂದು ಚೌಹಾಣ್ ಸ್ಪಷ್ಟಪಡಿಸಿದ್ದಾರೆ.