ಹಿಂದೆ ತಟಸ್ಥ ನಿಲುವು ಹೊಂದಿದ್ದ ಮಾಧ್ಯಮಗಳು ಈಗ ಧ್ರುವೀಕೃತಗೊಂಡಿವೆ ಎಂದ ಬಾಂಬೆ ಹೈಕೋರ್ಟ್
ಮುಂಬೈ: ಹಿಂದೆ ಪತ್ರಕರ್ತರು ತಟಸ್ಥ ನಿಲವು ಹೊಂದಿರುತ್ತಿದ್ದರು ಹಾಗೂ ಜವಾಬ್ದಾರಿಯುತರಾಗಿದ್ದರೆ ಈಗ ಮಾಧ್ಯಮ "ಬಹಳಷ್ಟು ಧ್ರುವೀಕೃತಗೊಂಡಿವೆ" ಎಂದು ಬಾಂಬೆ ಹೈಕೋರ್ಟ್ ಶುಕ್ರವಾರ ಅಭಿಪ್ರಾಯ ಪಟ್ಟಿದೆ.
ಸುಶಾಂತ್ ಸಿಂಗ್ ರಾಜಪುತ್ ಸಾವು ಪ್ರಕರಣದಲ್ಲಿ 'ಮಾಧ್ಯಮ ವಿಚಾರಣೆ'ಗೆ ನಿಯಂತ್ರಣ ಹೇರಬೇಕೆಂದು ಕೋರಿ ಮಹಾರಾಷ್ಟ್ರದ ಎಂಟು ಮಂದಿ ಹಿರಿಯ ಪೊಲೀಸ್ ಅಧಿಕಾರಿಗಳು, ಹೋರಾಟಗಾರರು, ವಕೀಲರುಗಳು ಹಾಗೂ ಎನ್ ಜಿಒಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆ ಮೇಲಿನ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ದೀಪಾಂಕರ್ ದತ್ತ ಹಾಗೂ ಜಸ್ಟಿಸ್ ಗಿರೀಶ್ ಎಸ್ ಕುಲಕರ್ಣಿ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿದೆ.
ಅಪೀಲುದಾರರು ಹೇಳಿದಂತೆ ತಮ್ಮ ಸುದ್ದಿ ವಾಹಿನಿ ತಪ್ಪು ಮಾಡಿಲ್ಲ ಎಂದು 'ಝೀ ನ್ಯೂಸ್' ಪರ ವಕೀಲ ಅಂಕಿತ್ ಲೋಹಿಯಾ ಅವರು ಹೇಳಿದ ಬೆನ್ನಲ್ಲೇ ಹೈಕೋರ್ಟ್ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದೆ.
"ಇತರರ ವಿರುದ್ಧ ಆರೋಪ ಹೊರಿಸುತ್ತಾ ಹೋಗುವವರು ಮಾಧ್ಯಮ ಸ್ವಾತಂತ್ರ್ಯದಡಿಯಲ್ಲಿ ಹೇಗೆ ಆಶ್ರಯ ಪಡೆಯಬಹುದು?'' ಎಂದು ಮುಖ್ಯ ನ್ಯಾಮೂರ್ತಿ ದತ್ತಾ ಪ್ರಶ್ನಿಸಿದರು.
ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಅಕ್ಟೋಬರ್ 29ಕ್ಕೆ ನಿಗದಿ ಪಡಿಸಿದೆ.