ಮೆಡಿಕಲ್ ಕಾಲೇಜುಗಳಲ್ಲಿ ಒಬಿಸಿ ಮೀಸಲಾತಿ ಕೋರಿದ ತಮಿಳುನಾಡಿನ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್
ಹೊಸದಿಲ್ಲಿ: ಈ ಶೈಕ್ಷಣಿಕ ವರ್ಷದಲ್ಲಿ ಸರಕಾರಿ ಸ್ವಾಮ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಅಖಿಲ ಭಾರತ ಕೋಟಾ ಸ್ಥಾನಗಳಿಗೆ ತಮಿಳುನಾಡಿನಲ್ಲಿ ಶೇ.50ರಷ್ಟು ಒಬಿಸಿ ಮೀಸಲಾತಿಯನ್ನು ಕೋರಿ ತಮಿಳುನಾಡು ಸರಕಾರ ಸಹಿತ ಹಲವರು ಸಲ್ಲಿಸಿರುವ ಅರ್ಜಿಗಳನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ. ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್ ನೇತೃತ್ವದ ಸುಪ್ರೀಂಕೋರ್ಟ್ ನ್ಯಾಯಪೀಠ ಇಂದು ಈ ಅರ್ಜಿಗಳನ್ನು ಆಲಿಸಿತು.
ಈ ವರ್ಷ ಶೇ.50ರಷ್ಟು ಒಬಿಸಿ ಮೀಸಲಾತಿಯನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ತಿಳಿಸಿದ ಬಳಿಕ ತಮಿಳುನಾಡು ಸರಕಾರ, ಆಡಳಿತರೂಢ ಎಐಎಡಿಎಂಕೆ ಹಾಗೂ ಡಿಎಂಕೆ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದವು.
ತಮಿಳುನಾಡು ಸರಕಾರ ಸಲ್ಲಿಸಿರುವ ಅಖಿಲ ಭಾರತ ಸ್ಥಾನಗಳಲ್ಲಿ ಒಬಿಸಿ ಮೀಸಲಾತಿ ನೀಡುವ ವಿಷಯದ ಕುರಿತು ತೀರ್ಮಾನ ತೆಗೆದುಕೊಳ್ಳಲು ಕೇಂದ್ರ,ರಾಜ್ಯ ಹಾಗೂ ವೈದ್ಯಕೀಯ ಮಂಡಳಿಯ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸುವಂತೆ ಹೈಕೋರ್ಟ್ ಜು.27ರಂದು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿತ್ತು. ಆದಾಗ್ಯೂ ಸಮಿತಿಯ ಯಾವುದೇ ನಿರ್ಧಾರವು ಭವಿಷ್ಯದ ಶೈಕ್ಷಣಿಕ ವರ್ಷಗಳಿಗೆ ಅನ್ವಯವಾಗುತ್ತದೆಯೇ ಹೊರತು ಪ್ರಸ್ತುತ ನಿರ್ಧಾರಕ್ಕೆ ಇದು ಅನ್ವಯಿಸದು ಎಂದು ನ್ಯಾಯಾಲಯ ಹೇಳಿದೆ.