ರಿಪಬ್ಲಿಕ್ ಟಿವಿ, ಅರ್ನಬ್ ವಿರುದ್ಧ ವಾಗ್ದಾಳಿ ನಡೆಸಿದ ರವೀಶ್ ಕುಮಾರ್ ಮುಂಬೈ ಪೊಲೀಸರಿಗೆ ಹೇಳಿದ್ದೇನು?
ಹೊಸದಿಲ್ಲಿ: ಅರ್ನಬ್ ಗೋಸ್ವಾಮಿ ಪತ್ರಿಕೋದ್ಯಮಕ್ಕೆ ‘ಅಶ್ಲೀಲತೆ’ಯನ್ನು ತಂದಿದ್ದಾರೆ ಎಂದು ಹಿರಿಯ ಪತ್ರಕರ್ತ, ಎನ್ ಡಿಟಿವಿಯ ರವೀಶ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಫೇಸ್ ಬುಕ್ ಪೋಸ್ಟ್ ಮಾಡಿರುವ ಅವರು, ಟಿಆರ್ ಪಿ ಹಗರಣದಲ್ಲಿ ಅರ್ನಬ್ ಗೋಸ್ವಾಮಿಯವರ ತಪ್ಪಿಗಾಗಿ ರಿಪಬ್ಲಿಕ್ ಟಿವಿಯ ಇತರ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳುತ್ತಿರುವ ಮುಂಬೈ ಪೊಲೀಸರ ಕ್ರಮವನ್ನು ಕೂಡ ಟೀಕಿಸಿದ್ದಾರೆ.
ಟಿಆರ್ ಪಿ ಹಗರಣದಲ್ಲಿ ತನಿಖೆ ಇನ್ನೂ ಪ್ರಗತಿಯಲ್ಲಿರುವಾಗಲೇ ರಿಪಬ್ಲಿಕ್ ಟಿವಿಯ ಪತ್ರಕರ್ತರ ವಿರುದ್ಧ ಎಫ್ ಐಆರ್ ದಾಖಲಿಸಿರುವುದರ ಬಗ್ಗೆ ಎಡಿಟರ್ಸ್ ಗಿಲ್ಡ್ ಕಳವಳ ವ್ಯಕ್ತಪಡಿಸಿದ ಬಳಿಕ ರವೀಶ್ ಕುಮಾರ್ ಈ ಹೇಳಿಕೆ ನೀಡಿದ್ದಾರೆ.
ಅರ್ನಬ್ ಗೋಸ್ವಾಮಿಯ ತಪ್ಪಿಗಾಗಿ ಸಂಪಾದಕೀಯ ತಂಡದ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದನ್ನು ಖಂಡಿಸಿರುವ ಅವರು, “ಮಾಲಕ ಮತ್ತು ಒಬ್ಬ ನಿರೂಪಕನ ತಪ್ಪಿಗಾಗಿ ಇತರರಿಗೆ ಶಿಕ್ಷೆ ವಿಧಿಸುತ್ತಿರುವುದು ಯಾಕೆ?, ಈ ನಿರೂಪಕ ಪತ್ರಿಕೋದ್ಯಕ್ಕೆ ಕಳಂಕ ತಂದಿದ್ದಾರೆ. ಅವರು ಪತ್ರಿಕೋದ್ಯಕ್ಕೆ ‘ಅಶ್ಲೀಲತೆ’ಯನ್ನು ತಂದಿದ್ದಾರೆ” ಎಂದಿದ್ದಾರೆ.