ಬಿಜೆಪಿ ಮುಖಂಡ ಬೈಜಯಂತ್ ಪಾಂಡಾರ ಸುದ್ದಿವಾಹಿನಿ ಸಿಎಫ್ಓ ಸೆರೆ
ಬೈಜ್ಯನಾಥ್ ಪಾಂಡಾ
ಭುವನೇಶ್ವರ : ಒಡಿಶಾ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧಗಳ ವಿಭಾಗ, ಬಿಜೆಪಿ ಮುಖಂಡ ಬೈಜಯಂತ್ ಪಾಂಡಾ ಅವರ ಸುದ್ದಿವಾಹಿನಿಯ ಮುಖ್ಯ ಹಣಕಾಸು ಅಧಿಕಾರಿಯನ್ನು ರವಿವಾರ ಬಂಧಿಸಲಾಗಿದೆ.
ಅಕ್ರಮವಾಗಿ ಭೂಮಿ ಖರೀದಿಸಿದ ಆರೋಪದಲ್ಲಿ ಒಡಿಶಾ ಇನ್ಫ್ರಾಟೆಕ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕ ಮನೋರಂಜನ್ ಸಾರಂಗಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈತ ಬಿಜೆಪಿ ಮುಖಂಡ ಬೈಜಯಂತ್ ಪಾಂಡಾ ಕುಟುಂಬದ ಮಾಲಕತ್ವದ ಓಟಿವಿ ನೆಟ್ವರ್ಕ್ನ ಮುಖ್ಯ ಹಣಕಾಸು ಅಧಿಕಾರಿ. ಒಡಿಶಾ ಇನ್ಫ್ರಾಟೆಕ್ ಖುರ್ದಾ ಜಿಲ್ಲೆಯ ಬೆಗುನಿಯಾ ತಾಲೂಕಿನ ಸರೂವಾ ಎಂಬ ಗ್ರಾಮದಲ್ಲಿ ಅಕ್ರಮವಾಗಿ ಭೂಮಿಯನ್ನು ಖರೀದಿಸಲಾಗಿದೆ ಎಂದು ಆರ್ಥಿಕ ಅಪರಾಧಗಳ ವಿಭಾಗದ ಅಧಿಕೃತ ಹೇಳಿಕೆಯಲ್ಲಿ ವಿವರಿಸಲಾಗಿದೆ.
ಅಕ್ರಮ ಭೂಮಿ ಖರೀದಿ ಸಂಬಂಧ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಕೆಲ ವ್ಯಕ್ತಿಗಳು ಮಾಡಿದ ಆರೋಪದ ಬಗ್ಗೆ ಅಪರಾಧ ವಿಭಾಗ ತನಿಖೆ ನಡೆಸುವಂತೆ 15 ದಿನಗಳ ಹಿಂದೆ ರಾಜ್ಯ ಸರ್ಕಾರ ಆದೇಶಿಸಿತ್ತು.
"ಒಡಿಶಾ ಇನ್ಫ್ರಾಟೆಕ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ ಪರಿಶಿಷ್ಟ ಜಾತಿಯವರಿಗೆ ಸೇರಿದ ಭೂಮಿಯನ್ನು ಅವರಿಗೆ ನಷ್ಟ ಮಾಡುವ ಉದ್ದೇಶದಿಂದ ನಿಯಮಾವಳಿ ಉಲ್ಲಂಘಿಸಿ/ ಫೋರ್ಜರಿ/ ವಂಚನೆ/ ಅತಿಕ್ರಮಣ ಮತ್ತು ಇತರ ಕಾನೂನುಬಾಹಿರ ವಿಧಾನಗಳ ಮೂಲಕ ಖರೀದಿಸಿದೆ" ಎಂದು ಹೇಳಿಕೆ ವಿವರಿಸಿದೆ.
ಭಾರತೀಯ ದಂಡಸಂಹಿತೆಯ ಸೆಕ್ಷನ್ 420 (ವಂಚನೆ, 423 (ವರ್ಗಾವಣೆ ಒಪ್ಪಂದದ ಅಪ್ರಮಾಣಿಕ ಜಾರಿ), 467 (ಫೋರ್ಜರಿ), 468 (ವಂಚನೆ ಉದ್ದೇಶದಿಂದ ಫೋರ್ಜರಿ), 471 (ನಕಲಿ ದಾಖಲೆಯನ್ನು ನೈಜ ಎಂದು ಬಳಸುವುದು) ಹಾಗೂ 120ಬಿ (ಅಪರಾಧ ಪಿತೂರಿ) ಅನ್ವಯ ಪ್ರಕರಣ ದಾಖಲಿಸಲಾಗಿದೆ.