ಹಾಥರಸ್ ಪ್ರಕರಣ: ಆದೇಶ ಕಾಯ್ದಿರಿಸಿದ ಅಲಹಾಬಾದ್ ಹೈಕೋರ್ಟ್
ಲಕ್ನೋ, ನ. 3: ಹಾಥರಸ್ ಅತ್ಯಾಚಾರ ಹಾಗೂ ಹತ್ಯೆ ಮುಚ್ಚಿ ಹಾಕುವುದರಲ್ಲಿ ಪೊಲೀಸರು ಹಾಗೂ ಆಡಳಿತದ ಕೈವಾಡ ಇದೆ ಎಂದು ಆರೋಪಿಸಿ ಸಲ್ಲಿಸಿದ ಅರ್ಜಿಯ ಆದೇಶವನ್ನು ಅಲಹಾಬಾದ್ ಉಚ್ಚ ನ್ಯಾಯಾಲಯದ ಲಕ್ನೋ ನ್ಯಾಯಪೀಠ ಸೋಮವಾರ ಕಾಯ್ದಿರಿಸಿದೆ.
ಈ ಅರ್ಜಿಯ ಮುಂದಿನ ವಿಚಾರಣೆ ನಡೆಯಲಿರುವ ನವೆಂಬರ್ 25ರಂದು ಸ್ಥಿತಿ ಗತಿ ವರದಿ ಸಲ್ಲಿಸುವಂತೆ ಉಚ್ಚ ನ್ಯಾಯಾಲಯ ಸಿಬಿಐಗೆ ನಿರ್ದೇಶಿಸಿದೆ ಎಂದು ಪ್ರಕರಣದ ಆ್ಯಮಿಕಸ್ ಕ್ಯೂರಿ ಆಗಿರುವ ಹಿರಿಯ ವಕೀಲ ಜೈದೀಪ್ ನರೈನ್ ಮಾಥುರ್ ಹೇಳಿದ್ದಾರೆ. ಕಳೆದ ಅಕ್ಟೋಬರ್ 12ರಂದು ನಡೆದ ವಿಚಾರಣೆ ವೇಳೆ ನೀಡಿದ ನಿರ್ದೇಶನದಂತೆ ಹೆಚ್ಚುವರಿ ಪ್ರಧಾನ ನಿರ್ದೇಶಕ (ಕಾನೂನು ಹಾಗೂ ಸುವ್ಯವಸ್ಥೆ) ಪ್ರಶಾಂತ್ ಕುಮಾರ್, ರಾಜ್ಯ ಗೃಹ ಕಾರ್ಯದರ್ಶಿ ತರುಣ್ ಗಬಾ ಹಾಗೂ ಅಮಾನತುಗೊಂಡ ಹಾಥರಸ್ನ ಪೊಲೀಸ್ ಅಧೀಕ್ಷಕ ವಿಕ್ರಾಂತ್ ವಿರ್ ಸಿಂಗ್ ಅವರು ನ್ಯಾಯಾಲಯದ ಮುಂದೆ ಹಾಜರಾಗಿದ್ದರು.
ಹಾಥರಸ್ನ ಜಿಲ್ಲಾ ದಂಡಾಧಿಕಾರಿ ಪ್ರವೀಣ್ ಕುಮಾರ್ ಲೆಕ್ಸರ್ ಕೂಡ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಪ್ರಕರಣವನ್ನು ನ್ಯಾಯಮೂರ್ತಿ ಪಂಕಜ್ ಮಿತ್ತಲ್ ಹಾಗೂ ರಾಜನ್ ರಾಯ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯ ಪೀಠ ವಿಚಾರಣೆ ನಡೆಸಿತು.