‘ಸಿಬಿಐ ತನಿಖೆಗೆ ಒಪ್ಪಿಗೆ’ ಹಿಂಪಡೆದ ಕೇರಳ
ತಿರುವನಂತಪುರ, ನ. 4: ರಾಜ್ಯದಲ್ಲಿ ತನಿಖೆ ನಡೆಸಲು ಸಿಬಿಐಗೆ ನೀಡುವ ಅನುಮತಿಯನ್ನು ಇತರ ಬಿಜೆಪಿಯೇತರ ರಾಜ್ಯಗಳಂತೆ ಕೇರಳ ಸರಕಾರ ಕೂಡ ಬುಧವಾರ ಹಿಂಪಡೆದಿದೆ. ಇನ್ನು ಮುಂದೆ ಪ್ರತಿಯೊಂದು ಪ್ರಕರಣದ ತನಿಖೆ ನಡೆಸಲು ಸಿಬಿಐ ರಾಜ್ಯ ಸರಕಾರದ ಅನುಮತಿ ಕೋರಬೇಕು.
ಸಿಬಿಐ ದಿಲ್ಲಿ ವಿಶೇಷ ಪೊಲೀಸ್ ಸ್ಥಾಪನಾ ಕಾಯ್ದೆ ಅಡಿಯಲ್ಲಿ ಬರುತ್ತದೆ. ರಾಜ್ಯದಲ್ಲಿರುವ ಕೇಂದ್ರ ಸರಕಾರದ ಉದ್ಯೋಗಿಗಳ ವಿರುದ್ಧದ ಆರೋಪದ ಬಗ್ಗೆ ತನಿಖೆ ನಡೆಸಲು ಸಿಬಿಐಗೆ ರಾಜ್ಯ ಸರಕಾರದ ಅನುಮತಿಯ ಅಗತ್ಯ ಇದೆ. ಯಾಕೆಂದರೆ, ಪೊಲೀಸ್ ಹಾಗೂ ಸಾರ್ವಜನಿಕ ಸುವ್ಯವಸ್ಥೆ ರಾಜ್ಯ ಸರಕಾರದ ವ್ಯಾಪ್ತಿಯ ಬರುತ್ತದೆ. ಸಿಬಿಐಗೆ ತನಿಖೆ ನಡೆಸಲು ನೀಡಿದ್ದ ಅನುಮತಿಯನ್ನು ಮಹಾರಾಷ್ಟ್ರ ಸರಕಾರ ಅಕ್ಟೋಬರ್ 21ರಂದು ಹಿಂದೆ ಪಡೆದಿದೆ. ಈ ವರ್ಷದ ಆರಂಭದಲ್ಲಿ ರಾಜಸ್ಥಾನ ಕೂಡ ಈ ಅನುಮತಿಯನ್ನು ಹಿಂದೆ ಪಡೆದಿತ್ತು. ಪಶ್ಚಿಮಬಂಗಾಳ, ಛತ್ತೀಸ್ಗಢ ಹಾಗೂ ಆಂಧ್ರಪ್ರದೇಶ ಕೂಡ ಈ ಅನುಮತಿಯನ್ನು 2019ರಲ್ಲಿ ರದ್ದುಪಡಿಸಿತ್ತು. ಕೇರಳ ಸರಕಾರದ ಈ ನಡೆಯನ್ನು ಸಿಪಿಐ ಸ್ವಾಗತಿಸಿದೆ.
Next Story