ಅಕ್ರಮ ಪಟಾಕಿ ಗೋದಾಮಿನಲ್ಲಿ ಸ್ಫೋಟ, ಮೂವರ ಮೃತ್ಯು
ಸಾಂದರ್ಭಿಕ ಚಿತ್ರ
ಖುಷಿನಗರ (ಉ.ಪ್ರ),ನ.4: ಖುಷಿನಗರ ಜಿಲ್ಲೆಯ ಕಪ್ತಾನಗಂಜ್ನಲ್ಲಿ ಬುಧವಾರ ಅಕ್ರಮ ಪಟಾಕಿ ಗೋದಾಮಿನಲ್ಲಿ ಸ್ಫೋಟ ಸಂಭವಿಸಿದ್ದು,ಮೂವರು ಮೃತಪಟ್ಟಿದ್ದಾರೆ ಮತ್ತು 10ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಇಲ್ಲಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಜಾವೇದ್ ಎಂಬಾತ ಪಟ್ಟಣದ ಜನನಿಬಿಡ ಪ್ರದೇಶದ ಕಿರಿದಾದ ಓಣಿಯೊಂದರಲ್ಲಿರುವ ತನ್ನ ಮನೆಯ ತಳಅಂತಸ್ತಿನಲ್ಲಿ ಅಕ್ರಮವಾಗಿ ಪಟಾಕಿಗಳನ್ನು ದಾಸ್ತಾನಿರಿಸಿದ್ದ. ಪಟಾಕಿ ದಾಸ್ತಾನಿಗೆ ಬೆಂಕಿ ಹತ್ತಿಕೊಂಡಾಗ ಮನೆಯಲ್ಲಿದ್ದ ಅಡಿಗೆ ಅನಿಲದ ಸಿಲಿಂಡರ್ ಕೂಡ ಸ್ಫೋಟಿಸಿದೆ. ಮನೆಯು ಸಂಪೂರ್ಣವಾಗಿ ಭಸ್ಮಗೊಂಡಿದ್ದು, ನೆರೆಹೊರೆಯ ಕೆಲವು ಮನೆಗಳಿಗೂ ಹಾನಿಯುಂಟಾಗಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೂರು ಗಂಟೆಗಳ ಕಾಲ ಶ್ರಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೃತರನ್ನು ಜಾವೇದ್(35),ಆತನ ತಾಯಿ ಫಾತಿಮಾ (65) ಮತ್ತು ನಾಝಿಯಾ (14) ಎಂದು ಗುರುತಿಸಲಾಗಿದೆ.
Next Story