ಜಮ್ಮು ಕಾಶ್ಮೀರದ ಜನರು ತಮ್ಮ ಹಕ್ಕು ಮರಳಿ ಪಡೆಯುವವರೆಗೆ ಹೋರಾಟ: ಫಾರೂಕ್ ಅಬ್ದುಲ್ಲಾ
ಜಮ್ಮು, ನ. 7: ಜಮ್ಮು ಹಾಗೂ ಕಾಶ್ಮೀರದ ಜನರು ತಮ್ಮ ಹಕ್ಕುಗಳನ್ನು ಮರಳಿ ಪಡೆಯುವ ವರೆಗೆ ತಾನು ನಿದ್ರಿಸುವುದಿಲ್ಲ ಎಂದು ಲೋಕಸಭಾ ಸಂಸದ ಹಾಗೂ ನ್ಯಾಶನಲ್ ಕಾನ್ಫರೆನ್ಸ್ನ ವರಿಷ್ಠ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
‘‘ನನಗೆ 85 ವರ್ಷ. ಆದರೆ, ನಾನು ಈಗಲೂ ಯುವಕ. ಜನರು ತಮ್ಮ ಹಕ್ಕುಗಳನ್ನು ಮರಳಿ ಪಡೆಯುವ ವರೆಗೆ ನಾನು ನಿದ್ರಿಸುವುದಿಲ್ಲ. ಜನರಿಗೆ ಹಕ್ಕು ದೊರೆತರೆ, ನಾನು ತೆರಳಲಿದ್ದೇನೆ’’ ಎಂದು ಜಮ್ಮುವಿನ ಶೇರ್-ಇ-ಕಾಶ್ಮೀರಿ ಭವನದಲ್ಲಿ ಸೇರಿದ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಹೇಳಿದರು. ನಾನು ಕಲ್ಲು ತೂರಾಟ ನಡೆಸುವುದಿಲ್ಲ. ಆದರೆ, ನಾವು ನಮ್ಮ ಅನನ್ಯತೆಗಾಗಿ ಹೋರಾಟ ನಡೆಸಬೇಕು. ನಾವು ಹೋರಾಡಬೇಕು ಹಾಗೂ ಜಯ ಗಳಿಸಬೇಕು ಎಂದು ಅವರು ಹೇಳಿದರು.
ಬಿಜೆಪಿ ಪಕ್ಷದ ಕಾರ್ಯಸೂಚಿ ಹಾಗೂ ದೇಶದ ಕಾರ್ಯಸೂಚಿಯನ್ನು ಮಿಶ್ರ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಟ್ರಂಪ್ ಸೋತರು, ಬಿಜೆಪಿ ಕೂಡ ಹೋಗಲಿದೆ. ಪಕ್ಷಕ್ಕಿಂತ ಭಾರತ ತುಂಬಾ ದೊಡ್ಡದು ಎಂದರು. ಪಾಕಿಸ್ತಾನ, ಭಾರತಕ್ಕೆ ಬೆಂಬಲಿಸುತ್ತಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಫಾರೂಕ್ ಅಬ್ದುಲ್ಲಾ, ಜಿನೇವಾದಲ್ಲಿ ಭಾರತದ ಕುರಿತು ಮಾತನಾಡುವಾಗ ನೀವು ಎಲ್ಲಿದ್ದೀರಿ ಎಂದು ಪ್ರಶ್ನಿಸಿದರು. ಅಲ್ಲದೆ, ಅಂದು ತನ್ನೊಂದಿಗೆ ಅಟಲ್ ಬಿಹಾರಿ ವಾಜಪೇಯಿ ಅವರು ಇದ್ದ ಬಗ್ಗೆ ಕೂಡ ಹೇಳಿದರು.