ಭೂಮಿ ಮಾರಾಟ ಮಾಡುವುದನ್ನು ನಿರ್ಧರಿಸುವ ಕಾಶ್ಮೀರದ ಜನರ ಹಕ್ಕನ್ನು ಕಸಿಯುವುದಿಲ್ಲ
ಕೇಂದ್ರ ಸಚಿವ ಜಿತೇಂದ್ರ ಸಿಂಗ್
ಹೊಸದಿಲ್ಲಿ, ನ. 7: ವಿಧಿ 370 ರದ್ದತಿ ಹಾಗೂ ಜಮ್ಮು ಹಾಗೂ ಕಾಶ್ಮೀರದಲ್ಲಿ ದೇಶಾದ್ಯಂತದ ಜನರು ಭೂಮಿ ಖರೀದಿಸುವುದಕ್ಕೆ ಅವಕಾಶ ನೀಡುವ ಭೂ ಕಾನೂನಿನಲ್ಲಿ ತಂದ ಸುಧಾರಣೆ ತಮ್ಮ ಭೂಮಿಯನ್ನು ಮಾರಬೇಕೇ, ಬೇಡವೇ ? ಎಂಬುದನ್ನು ನಿರ್ಧರಿಸುವ ಜಮ್ಮು ಕಾಶ್ಮೀರದ ಜನರ ಹಕ್ಕನ್ನು ಕಸಿದುಕೊಳ್ಳುವುದಿಲ್ಲ ಎಂದು ಕೇಂದ್ರ ಸಚಿವ ಚಿತೇಂದ್ರ ಸಿಂಗ್ ರವಿವಾರ ಹೇಳಿದ್ದಾರೆ.
ಈ ನೂತನ ಭೂ ಕಾಯ್ದೆಯಿಂದ ಜಮ್ಮು ವಲಯದಲ್ಲಿ ಕಡಿಮೆ ಹಣ ನೀಡಿ ಸುಲಭವಾಗಿ ಭೂಮಿ ಖರೀದಿಸಲು ಸಾಧ್ಯವಾಗದೇ ಇರುವುದರಿಂದ ಕಾಶ್ಮೀರ ಕೇಂದ್ರಿತ ತಥಾಕಥಿತ ಮುಖ್ಯ ವಾಹಿನಿಯ ನಾಯಕರು ಬಡಬಡಿಸುತ್ತಿದ್ದಾರೆ ಎಂದು ಅವರು ಪ್ರತಿಪಾದಿಸಿದರು.
ಜಮ್ಮುವಿನ ಜನರಿಗೆ ಈಗ ದೇಶಾದ್ಯಂತದಿಂದ ತಮ್ಮ ಖರೀದಿಗಾರರನ್ನು ಆಯ್ಕೆ ಮಾಡಿಕೊಳ್ಳುವ ಹಾಗೂ ಅತ್ಯುತ್ತಮ ಬೆಲೆ ಆಗ್ರಹಿಸುವ ಅವಕಾಶ ಸಿಗಲಿದೆ ಎಂದು ಅವರು ಹೇಳಿದ್ದಾರೆ.
ನೂತನ ಭೂ ಕಾನೂನು ಇಲ್ಲಿ ಯಾರೊಬ್ಬರ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ಅಥವಾ ಮಾಲಕರ ಒಪ್ಪಿಗೆ ಇಲ್ಲದ ಭೂಮಿ ಖರೀದಿಸಲು ಅವಕಾಶ ನೀಡುವುದಿಲ್ಲ ಎಂದು ಸಿಂಗ್ ಹೇಳಿದರು.
Next Story