ನಿತೀಶ್ ಕುಮಾರ್, ಸುಶೀಲ್ ಮೋದಿ 10 ಕ್ಷೇತ್ರಗಳಲ್ಲಿ ಮತ ಎಣಿಕೆ ವಿಳಂಬ ಮಾಡುತ್ತಿದ್ದಾರೆ: ಆರ್ ಜೆಡಿ ಆರೋಪ
ಪಾಟ್ನಾ: ತೀವ್ರ ಪೈಪೋಟಿ ಇರುವ ಕ್ಷೇತ್ರಗಳಲ್ಲಿ ಫಲಿತಾಂಶ ತಮ್ಮ ಪರವಾಗಿ ಬರುವಂತೆ ಮಾಡಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಜಿಲ್ಲಾ ಹಾಗೂ ಚುನಾವಣಾ ಅಧಿಕಾರಿಗಳಮೇಲೆ ಒತ್ತಡ ಹೇರಲು ಸಂಚು ರೂಪಿಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ನೇತೃತ್ವದ ಆರ್ ಜೆಡಿ ಆರೋಪಿಸಿದೆ.
ಮಂಗಳವಾರ ರಾತ್ರಿ ಹಿಂದಿಯಲ್ಲಿ ಟ್ವೀಟಿಸಿದ ಯಾದವ್, ಮತ ಎಣಿಕೆ ಆರಂಭವಾಗಿ 12 ಗಂಟೆಗಳೇ ಕಳೆದಿವೆ. ಕನಿಷ್ಠ 10 ಸ್ಥಾನಗಳನ್ನು ಗೆದ್ದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರವನ್ನು ಹಸ್ತಾಂತರಿಸಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಆರ್ ಜೆಡಿ ಆರೋಪಿಸಿದೆ.
ನಿತೀಶ್ ಕುಮಾರ್ ಆಡಳಿತವು ಕನಿಷ್ಠ 10 ಕ್ಷೇತ್ರಗಳಲ್ಲಿ ಮತ ಎಣಿಕೆಯನ್ನು ವಿಳಂಬ ಮಾಡುತ್ತಿದೆ. ಗೆದ್ದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ನೀಡಿಲ್ಲ. ಮುಖ್ಯಮಂತ್ರಿಯವರ ನಿವಾಸದಲ್ಲಿ ಕುಳಿತುಕೊಂಡು ನಿತೀಶ್ ಕುಮಾರ್ ಹಾಗೂ ಸುಶೀಲ್ ಕುಮಾರ್ ಅಲ್ಪ ಮತಗಳ ಅಂತರ ವಿರುವ ಕ್ಷೇತ್ರಗಳಲ್ಲಿ ಫಲಿತಾಂಶ ತಮ್ಮ ಪರವಾಗಿ ಬರಲು ಮುಖ್ಯ ಕಾರ್ಯದರ್ಶಿಗಳ ಮೂಲಕ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆರ್ ಜೆಡಿ ಪಕ್ಷ ಹೇಳಿಕೆಯೊಂದರಲ್ಲಿ ತಿಳಿಸಿದೆ.