ಆಂಧ್ರ ಸಿಎಂ ಜಗನ್ ವಿರುದ್ಧದ ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶ
ಹೊಸದಿಲ್ಲಿ: ನ್ಯಾಯಾಂಗದ ವಿರುದ್ಧ ಆರೋಪಗಳನ್ನು ಮಾಡಿದ್ದಕ್ಕಾಗಿ ಆಂಧ್ರ ಪ್ರದೇಶ ಸಿಎಂ ವೈ.ಎಸ್. ಜಗನ್ಮೋಹನ್ ರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಯು.ಯು. ಲಲಿತ್ ಹಿಂದೆ ಸರಿದಿದ್ದಾರೆ.
“ನನಗೆ ಸಮಸ್ಯೆಗಳಿವೆ, ವಕೀಲನಾಗಿ ನಾನು ಒಂದು ಕಕ್ಷಿದಾರರನ್ನು ಪ್ರತಿನಿಧಿಸಿದ್ದೆ. ನಾನು ಇಲ್ಲದ ಪೀಠಕ್ಕೆ ಪ್ರಕರಣ ಹಸ್ತಾಂತರಿಸಲು ಆದೇಶಿಸಲಾಗುವುದು” ಎಂದು ಜಸ್ಟಿಸ್ ಲಲಿತ್ ಹೇಳಿದ್ದಾರೆ.
ಜಗನ್ಮೋಹನ್ ರೆಡ್ಡಿ ವಿರುದ್ಧ ಸಲ್ಲಿಸಲಾಗಿದ್ದ ಮೂರು ಪ್ರತ್ಯೇಕ ಅರ್ಜಿಗಳನ್ನು ಜಸ್ಟಿಸ್ ಲಲಿತ್, ವಿನೀತ್ ಶರಣ್ ಮತ್ತು ಎಸ್. ರವೀಂದ್ರ ಭಟ್ ಅವರ ಪೀಠ ವಿಚಾರಣೆ ನಡೆಸುವುದಾಗಿ ನಿಗದಿಯಾಗಿತ್ತು.
ನ್ಯಾಯಾಂಗದ ವಿರುದ್ಧ ಆರೋಪಗಳನ್ನು ಹೊರಿಸಿ ಜಗನ್ಮೋಹನ್ ರೆಡ್ಡಿ ಸಿಜೆಐ ಬೊಬ್ಡೆಯವರಿಗೆ ಪತ್ರ ಬರೆದಿದ್ದು ಮಾತ್ರವಲ್ಲದೆ, ಸುದ್ದಿಗೋಷ್ಠಿಯಲ್ಲೂ ಕೆಲ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.
Next Story