ಪತ್ರಕರ್ತ, ಪತ್ನಿಯ ಥಳಿಸಿ ಹತ್ಯೆ
ಮೂವರು ಪೊಲೀಸರ ಅಮಾನತು
ಲಕ್ನೊ: ಪತ್ರಕರ್ತ ಹಾಗೂ ಆತನ ಪತ್ನಿಯನ್ನು ಥಳಿಸಿ ಹತ್ಯೆಗೈದಿರುವ ಘಟನೆಯು ಉತ್ತರಪ್ರದೇಶದ ಸೋನ್ ಭದ್ರಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭೀಕರ ಹಲ್ಲೆಗೆ ಸಂಬಂಧಿಸಿ ಆರು ಆರೋಪಿಗಳ ಪೈಕಿ ಐವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ, ಗ್ರಾಮದ ಮಾಜಿ ಅಧ್ಯಕ್ಷ ಕೆವಲ್ ಪಾಸ್ವಾನ್ ತಲೆ ಮರೆಸಿಕೊಂಡಿದ್ದಾನೆ.
ಪತ್ರಕರ್ತನನ್ನು ಉದಯ್ ಪಾಸ್ವಾನ್ ಎಂದು ಗುರುತಿಸಲಾಗಿದೆ. ಪಾಸ್ವಾನ್ ಹಿಂದಿ ದಿನಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು 'ನ್ಯಾಶನಲ್ ಹೆರಾಲ್ಡ್' ವರದಿ ಮಾಡಿದೆ.
ಪಾಸ್ವಾನ್ ಸ್ಥಳದಲ್ಲೇ ಸಾವನ್ನಪ್ಪಿದರೆ ಅವರ ಪತ್ನಿ ಶೀತಲ್ ತೀವ್ರ ಸ್ವರೂಪದ ಗಾಯದಿಂದಾಗಿ ಮಂಗಳವಾರ ವಾರಾಣಸಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಉದಯ್ ಪಾಸ್ವಾನ್ ತನಗೆ ಭದ್ರತೆ ನೀಡುವಂತೆ ಕೋನ್ ಪೊಲೀಸ್ ಠಾಣೆಯ ಮೊರೆ ಹೋಗಿದ್ದರು. ಆದರೆ ಈ ಕುರಿತು ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಕರ್ತವ್ಯ ಲೋಪದ ಮೇರೆಗೆ ಘಟನೆಯ ಬಳಿಕ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಕೋನ್ ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ಹಾಗೂ ಕಾನ್ ಸ್ಟೇಬಲ್ ನ್ನು ಅಮಾನತುಗೊಳಿಸಲಾಗಿದೆ ಎಂದು ಸೋನ್ ಭದ್ರ ಪೊಲೀಸ್ ಅಧೀಕ್ಷಕ ಆಶೀಷ್ ತಿಳಿಸಿದ್ದಾರೆ.