ಕಂಗನಾಗೆ ಮುಂಬೈ ಪೊಲೀಸರ ಸಮನ್ಸ್
ಮುಂಬೈ, ನ.18: ತಮ್ಮ ಹೇಳಿಕೆಗಳ ಮೂಲಕ ವಿಭಿನ್ನ ಸಮುದಾಯಗಳ ಮಧ್ಯೆ ದ್ವೇಷಭಾವನೆಗೆ ಪ್ರಚೋದನೆ ನೀಡಿರುವ ಆರೋಪದಲ್ಲಿ ನಟಿ ಕಂಗನಾ ರಣಾವತ್ ಮತ್ತು ಆಕೆಯ ಸಹೋದರಿ ರಂಗೋಲಿ ಚಂಡೇಲಾಗೆ ಮುಂಬೈ ಪೊಲೀಸರು ಬುಧವಾರ ಮೂರನೇ ಬಾರಿ ಸಮನ್ಸ್ ನೀಡಿದ್ದಾರೆ. ನವೆಂಬರ್ 23 ಮತ್ತು 24ರಂದು ಬಾಂದ್ರಾ ಪೊಲೀಸ್ ಠಾಣೆಯಲ್ಲಿ ನಡೆಯುವ ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೆ ಸಮನ್ಸ್ ನೀಡಲಾಗಿದೆ ಎಂದು ಪೊಲೀಸ್ ಉಪಾಯುಕ್ತ ಅಭಿಷೇಕ್ ತ್ರಿಮುಖೆ ಸುದ್ಧಿಗಾರರಿಗೆ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಅಕ್ಟೋಬರ್ 21ರಂದು ಸಮನ್ಸ್ ಹೊರಡಿಸಿದ್ದ ಪೊಲೀಸರು ತಮ್ಮೆದುರು ಹಾಜರಾಗಿ ವಿಚಾರಣೆ ಎದುರಿಸುವಂತೆ ತಿಳಿಸಿದ್ದರು. ಇದಕ್ಕೆ ಉತ್ತರಿಸಿದ ಕಂಗನಾರ ವಕೀಲರು, ಕಂಗನಾ ಮತ್ತು ರಂಗೋಲಿ ತಮ್ಮ ಸಹೋದರನ ವಿವಾಹ ಸಮಾರಂಭದ ಸಿದ್ಧತೆಯಲ್ಲಿ ನಿರತರಾಗಿರುವುದರಿಂದ ನವೆಂಬರ್ 15ರವರೆಗೆ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದರು. ನವೆಂಬರ್ 3ರಂದು ಎರಡನೇ ಬಾರಿ ಸಮನ್ಸ್ ಹೊರಡಿಸಿದ್ದ ಮುಂಬೈ ಪೊಲೀಸರು, ನವೆಂಬರ್ 10ರಂದು ವಿಚಾರಣೆಗೆ ಹಾಜರಾಗಲು ತಿಳಿಸಿದ್ದರು. ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದೀಗ ಮೂರನೇ ಬಾರಿ ಸಮನ್ಸ್ ಜಾರಿಗೊಳಿಸಲಾಗಿದೆ. ಕಂಗನಾ ಮತ್ತು ರಂಗೋಲಿ ಅವರ ಟ್ವೀಟ್ ಹಾಗೂ ಇತರ ಹೇಳಿಕೆಗಳನ್ನು ಉಲ್ಲೇಖಿಸಿ ಬಾಲಿವುಡ್ನ ಕಾಸ್ಟಿಂಗ್ ನಿರ್ದೇಶಕ ಮುನಾವರ್ ಆಲಿ ಸಯದ್ ಸಲ್ಲಿಸಿದ್ದ ದೂರಿನ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯವು ಮುಂಬೈ ಪೊಲೀಸರಿಗೆ ಸೂಚಿಸಿತ್ತು.