ರಾಜ್ಯದ ಒಪ್ಪಿಗೆ ಇಲ್ಲದೆ ಸಿಬಿಐ ಅಧಿಕಾರ ವ್ಯಾಪ್ತಿಯನ್ನು ಕೇಂದ್ರ ವಿಸ್ತರಿಸುವಂತಿಲ್ಲ: ಸುಪ್ರೀಂಕೋರ್ಟ್
ಹೊಸದಿಲ್ಲಿ: ರಾಜ್ಯ ಸರಕಾರದ ಒಪ್ಪಿಗೆ ಇಲ್ಲದೆ ಸಿಬಿಐ ತನಿಖೆಗೆ ಮುಂದಡಿ ಇಡುವಂತಿಲ್ಲ ಹಾಗೂ ರಾಜ್ಯ ಸರಕಾರದ ಅನುಮತಿ ಇಲ್ಲದೆ ಕೇಂದ್ರ ಸರಕಾರವು ಸಿಬಿಐ ಅಧಿಕಾರದ ವ್ಯಾಪ್ತಿಯನ್ನು ವಿಸ್ತರಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಉತ್ತರಪ್ರದೇಶದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದ ಆರೋಪಿಗಳಾಗಿರುವ ಅಧಿಕಾರಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ.
ಕಾನೂನಿನ ಪ್ರಕಾರ, ರಾಜ್ಯದ ಒಪ್ಪಿಗೆ ಅತ್ಯಗತ್ಯ ಹಾಗೂ ರಾಜ್ಯದ ಒಪ್ಪಿಗೆ ಇಲ್ಲದೆ ಕೇಂದ್ರ ಸರಕಾರವು ಸಿಬಿಐ ಅಧಿಕಾರದ ವ್ಯಾಪ್ತಿಯನ್ನು ವಿಸ್ತರಿಸಲು ಸಾಧ್ಯವಿಲ್ಲ. ಕಾನೂನು ಸಂವಿಧಾನದ ಒಕ್ಕೂಟ ರಚನೆಗೆ ಅನುಗುಣವಾಗಿದೆ ಎಂದು ಸುಪ್ರೀಂಕೋರ್ಟ್ ಬುಧವಾರ ತೀರ್ಪು ನೀಡಿದೆ.
ತಮ್ಮ ರಾಜ್ಯಗಳಲ್ಲಿನ ಸಿಬಿಐ ತನಿಖೆಗೆ ಒಪ್ಪಿಗೆ ರದ್ದುಪಡಿಸಿರುವ ರಾಜಸ್ಥಾನ, ಬಂಗಾಳ,ಜಾರ್ಖಂಡ್, ಕೇರಳ, ಮಹಾರಾಷ್ಟ್ರ, ಛತ್ತೀಸ್ಗಢ, ಪಂಜಾಬ್ ಹಾಗೂ ಮಿಝೋರಾಂ ರಾಜ್ಯಗಳಿಗೆ ಈ ತೀರ್ಪು ಮಹತ್ವದ್ದಾಗಿದೆ.
ಸಿಬಿಐಯನ್ನು ನಿಯಂತ್ರಿಸುವ ದಿಲ್ಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯ್ದೆಯನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಎಎಂ ಖಾನ್ವಿಲ್ಕರ್ ಹಾಗೂ ಬಿಆರ್ ಗವಾಯಿ ಉಲ್ಲೇಖಿಸಿದ್ದಾರೆ.