ಆಶ್ರಮದಲ್ಲಿ ಚಹಾ ಸೇವಿಸಿದ ಬಳಿಕ ಇಬ್ಬರು ಸಾಧುಗಳು ಮೃತ್ಯು
ಫೋಟೊ ಕೃಪೆ : timesofindia
ಹೊಸದಿಲ್ಲಿ:ಉತ್ತರಪ್ರದೇಶದ ಮಥುರಾದ ಆಶ್ರಮವೊಂದರಲ್ಲಿ ಚಹಾ ಸೇವಿಸಿದ್ದ ಇಬ್ಬರು ಸಾಧುಗಳು ನಿಗೂಡವಾಗಿ ಸಾವನ್ನಪ್ಪಿದ್ದು, ಗಂಭೀರ ಸ್ಥಿತಿಯಲ್ಲಿರುವ ಇನ್ನೋರ್ವ ಸಾಧುವನ್ನು ಆಸ್ಪತ್ರೆ ದಾಖಲಿಸಿರುವ ಘಟನೆ ಶನಿವಾರ ನಡೆದಿದೆ.
ಇಬ್ಬರು ಸಾಧುಗಳಾದ ಗುಲಾಬ್ ಸಿಂಗ್ ಹಾಗೂ ಶ್ಯಾಮ್ ಸುಂದರ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.
60ರ ವಯಸ್ಸಿನ ಗುಲಾಬ್ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಧು ಶ್ಯಾಮ್ ಸುಂದರ್ (61 ವರ್ಷ) ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ ಬಳಿಕ ಮೃತಪಟ್ಟಿದ್ದಾರೆ ಎಂದು ಮಥುರಾ ಎಸ್ ಎಸ್ಪಿ ಗೌರವ್ ಗ್ರೋವರ್ ಹೇಳಿದ್ದಾರೆ.
ಗಂಭೀರ ಸ್ಥಿತಿಯಲ್ಲಿರುವ ಮೂರನೇ ಸಾಧುವನ್ನು ರಾಮ್ ಬಾಬು ಎಂದು ಗುರುತಿಸಲಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಸಾಧುಗಳ ಸಾವಿಗೆ ನಿಖರ ಕಾರಣ ಪತ್ತೆ ಹಚ್ಚಲು ಪ್ರಕರಣದ ತನಿಖೆ ನಡೆಯುತ್ತಿದೆ. ಈ ತನಕ ಯಾರನ್ನೂ ಬಂಧಿಸಲಾಗಿಲ್ಲ ಎಂದು ಗ್ರೋವರ್ ತಿಳಿಸಿದ್ದಾರೆ.
ಇಬ್ಬರು ಸಾಧುಗಳು ಟೀ ಸೇವಿಸಿ ಸಾವನ್ನಪ್ಪಿರುವ ಆಶ್ರಮದಿಂದ ವಿಧಿವಿಜ್ಞಾನ ತಂಡವು ಪುರಾವೆಗಳನ್ನು ಕಲೆ ಹಾಕಿದೆ ಎಂದೂ ಗ್ರೋವರ್ ತಿಳಿಸಿದ್ದಾರೆ