ಕಾಂಗ್ರೆಸ್ನಲ್ಲಿ ಸುಧಾರಣೆಗಾಗಿ ಆಗ್ರಹಿಸುವವರು ಆತ್ಮಾವಲೋಕನ ಮಾಡಿಕೊಳ್ಳಲಿ: ಅಧಿರ್ ರಂಜನ್
ಕೋಲ್ಕತಾ: ಪಕ್ಷದೊಳಗೆ ಸುಧಾರಣೆ ಆಗಬೇಕಾಗಿದೆ ಎಂದು ಕರೆ ನೀಡುತ್ತಿರುವ ನಾಯಕರ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿರುವ ಲೋಕಸಭೆಯ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧುರಿ, ನಾಯಕರು ಮೊದಲು ಕನ್ನಡಿಯಲ್ಲಿ ಮುಖ ನೋಡಿಕೊಂಡು ಆತ್ಮಾವಲೋಕನ ನಡೆಸಿಕೊಳ್ಳಲಿ ಎಂದರು.
ಬಿಹಾರ ಚುನಾವಣೆಯ ಬಳಿಕ ಕಪಿಲ್ ಸಿಬಲ್ ಕಾಂಗ್ರೆಸ್ ನಾಯಕತ್ವದ ಕುರಿತು ಮಾತನಾಡಿದ ಹಿನ್ನೆಲೆಯಲ್ಲಿ ಚೌಧುರಿ ಈ ಪ್ರತಿಕ್ರಿಯೆ ನೀಡಿದರು. ಕಪಿಲ್ ಮಾತ್ರವಲ್ಲ ಕಾಂಗ್ರೆಸ್ನ ಹಿರಿಯ ನಾಯಕ ಗುಲಾಮ್ ನಬಿ ಆಝಾದ್ ಕೂಡ ಪಕ್ಷದಲ್ಲಿ ಆಳವಾದ ರಚನಾತ್ಮಕ ಸುಧಾರಣೆಯಾಗುವ ಅಗತ್ಯವಿದೆ ಎಂದಿದ್ದರು.
ನಾಯಕರು ಮಾಧ್ಯಮಗಳ ಮುಂದೆ ಮಾತನಾಡುವುದು ಸರಿಯಲ್ಲ. ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧಿವೇಶನ ನಡೆಯುವ ತನಕ ಕಾದು ಅಲ್ಲಿ ಮಾತನಾಡಬೇಕು. ಚುನಾವಣೆಯ ಸೋಲಿನ ಗಾಯದ ಮೇಲೆ ಉಪ್ಪು ಸವರುವುದು ಅವಕಾಶವಾದಿತನ. ಇದರಿಂದ ಕೆಲವು ಜನರು ಖುಷಿಪಡುತ್ತಿದ್ದಾರೆ.ಕಾಂಗ್ರೆಸ್ನಲ್ಲಿ ಒಂದು ಸಂಸ್ಕೃತಿ ಇದೆ. ಸಂಸ್ಕೃತಿಯ ಮೇಲೆ ದಾಳಿ ನಡೆಸುವುದು ಸರಿಯಲ್ಲ ಎಂದರು.
Next Story