ದಿಲ್ಲಿಯ 2 ಮಾರುಕಟ್ಟೆಗಳಲ್ಲಿ ಕೊರೋನ ಮಾರ್ಗದರ್ಶಿ ಸೂತ್ರ ಉಲ್ಲಂಘನೆ
ಮುಚ್ಚುವ ಆದೇಶವನ್ನು ಗಂಟೆಗಳ ಬಳಿಕ ಹಿಂಪಡೆದ ದಿಲ್ಲಿ ಸರಕಾರ
ಹೊಸದಿಲ್ಲಿ, ನ. 23: ಕೊರೋನದ ವಿವಿಧ ಸುರಕ್ಷಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಈ ತಿಂಗಳ ಅಂತ್ಯದವರೆಗೆ ಪಶ್ಚಿಮ ದಿಲ್ಲಿಯ ಎರಡು ಸಂಜೆ ಮಾರುಕಟ್ಟೆಗಳನ್ನು ಬಂದ್ ಮಾಡುವಂತೆ ರವಿವಾರ ರಾತ್ರಿ ಜಾರಿಗೊಳಿಸಲಾದ ಆದೇಶವನ್ನು ಗಂಟೆಗಳ ಬಳಿಕ ಹಿಂಪಡೆಯಲಾಗಿದೆ.
ಸುರಕ್ಷಿತ ಅಂತರ ಹಾಗೂ ಮಾಸ್ಕ್ ಧರಿಸುತ್ತಿಲ್ಲ ಎಂಬುದು ಪತ್ತೆಯಾದ ಬಳಿಕ ನಾಗ್ಲೋಯಿ ಪ್ರದೇಶದಲ್ಲಿರುವ ಎರಡು ಮಾರುಕಟ್ಟೆಗಳಾದ ಪಂಬಾಬಿ ಬಸ್ತಿ ಹಾಗೂ ಜಂತಾವನ್ನು ನವೆಂಬರ್ 30ರ ವರೆಗೆ ಮುಚ್ಚುವಂತೆ ದಿಲ್ಲಿ ಸರಕಾರ ಆದೇಶಿಸಿತ್ತು.
ಅಂಗಡಿ ಹಾಗೂ ಸ್ಟಾಲ್ಗಳು ಮುಚ್ಚಿವೆಯೇ ಎಂದು ಪರಿಶೀಲಿಸಲು ಪಶ್ಚಿಮ ದಿಲ್ಲಿ ಜಿಲ್ಲೆಯ ಅಧಿಕಾರಿಗಳು ಹಾಗೂ ಪೊಲೀಸರು ಈ ಎರಡು ಮಾರುಕಟ್ಟೆಗಳಿಗೆ ಭೇಟಿ ನೀಡಿದ್ದರು. ಅನಂತರ ಗಂಟೆಗಳ ಬಳಿಕ ಈ ಆದೇಶವನ್ನು ಹೊಸದಿಲ್ಲಿ ಸರಕಾರ ಹಿಂಪಡೆದಿತ್ತು.
ಶನಿವಾರ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಾರುಕಟ್ಟೆ ಸಂಘಟನೆಯ ಪ್ರತಿನಿಧಿಗಳೊಂದಿಗೆ ವರ್ಚುವಲ್ ಸಭೆ ನಡೆಸಿದ್ದರು. ತನ್ನ ಸರಕಾರ ಯಾವುದೇ ಮಾರುಕಟ್ಟೆಯನ್ನು ಮುಚ್ಚುವುದಿಲ್ಲ ಎಂದು ಹೇಳಿದ್ದರು. ಅಲ್ಲದೆ ಜನರಿಗೆ ಮಾಸ್ಕ್ ಪೂರೈಸುವಂತೆ ಮಾರುಕಟ್ಟೆ ಸಂಘಟನೆಯ ಪ್ರತಿನಿಧಿಗಳಿಗೆ ಸೂಚಿಸಿದ್ದರು.