"ವಿವಾಹ ಉದ್ದೇಶದ ಧಾರ್ಮಿಕ ಮತಾಂತರ ಸ್ವೀಕಾರಾರ್ಹವಲ್ಲ'' ಎಂಬ ತನ್ನ ಆದೇಶವನ್ನು ರದ್ದು ಪಡಿಸಿದ ಅಲಹಾಬಾದ್ ಹೈಕೋರ್ಟ್
ಲಕ್ನೋ : ಕೇವಲ ವಿವಾಹದ ಉದ್ದೇಶದ ಧಾರ್ಮಿಕ ಮತಾಂತರ ಸ್ವೀಕಾರಾರ್ಹವಲ್ಲ ಎಂದು ತಾನೇ ಈ ಹಿಂದೆ ನೀಡಿದ್ದ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ ರದ್ದುಗೊಳಿಸಿದೆ.
'ಲವ್ ಜಿಹಾದ್' ಅನ್ನು ಅಪರಾಧ ಎಂದು ಪರಿಗಣಿಸಿ ಹೊಸ ಕಾನೂನು ಜಾರಿಗೆ ತರುವುದಾಗಿ ಇತ್ತೀಚೆಗೆ ಹೇಳಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಈ ಸಂದರ್ಭ ಅಲಹಾಬಾದ್ ಹೈಕೋರ್ಟ್ ನ ನವೆಂಬರ್ 1ರ ತೀರ್ಪನ್ನೂ ಉಲ್ಲೇಖಿಸಿರುವುದರಿಂದ ಇದೀಗ ನ್ಯಾಯಾಲಯ ತನ್ನ ಹಿಂದಿನ ಆದೇಶದಿಂದ ಹಿಂದೆ ಸರಿದಿರುವುದು ಮಹತ್ವ ಪಡೆದಿದೆ. ಉತ್ತರ ಪ್ರದೇಶ ಸರಕಾರದ ಹೇಳಿಕೆ ಬೆನ್ನಲ್ಲೇ ಮಧ್ಯ ಪ್ರದೇಶ, ಹರ್ಯಾಣ ಮತ್ತು ಕರ್ನಾಟಕ ಸರಕಾರಗಳೂ ಈ ನಿಟ್ಟಿನಲ್ಲಿ ಕಾನೂನು ಜಾರಿಗೆ ತರುವ ಚಿಂತನೆ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದವು.
ನ್ಯಾಯಾಲಯವು ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಹಾಗೂ 2014ರಲ್ಲಿ ನೀಡಿರುವ ತೀರ್ಪುಗಳು "ಇಬ್ಬರು ಪ್ರಬುದ್ಧ ವ್ಯಕ್ತಿಗಳಿಗೆ ತಮ್ಮ ಸಂಗಾತಿಗಳನ್ನು ಆರಿಸುವ ಹಕ್ಕು ಅಥವಾ ಯಾರ ಜತೆ ಬಾಳಬೇಕೆಂದು ನಿರ್ಧರಿಸುವ ಅವರ ಹಕ್ಕು'' ವಿಚಾರದ ಕುರಿತಾಗಿರಲಿಲ್ಲ. ನೂರ್ ಜಹಾನ್ ಮತ್ತು ಪ್ರಿಯಾಂಶಿ ಪ್ರಕರಣಗಳಲ್ಲಿನ ತೀರ್ಪು ಉತ್ತಮ ಕಾನೂನು ಆಗಲು ಸಾಧ್ಯವಿಲ್ಲ,'' ಎಂದು ಜಸ್ಟಿಸ್ ವಿವೇಕ್ ಅಗರ್ವಾಲ್ ಹಾಗೂ ಪಂಕಜ್ ನಖ್ವಿ ಅವರನ್ನೊಳಗೊಂಡ ವಿಭಾಗೀಯ ಪೀಠ ಸೋಮವಾರ ಹೇಳಿದೆ.
ಮತಾಂತರದ ಸಿಂಧುತ್ವ ಏನೇ ಇರಲಿ, ಇಬ್ಬರು ವಯಸ್ಕರ ಒಟ್ಟಿಗೆ ಜೀವಿಸುವ ಹಕ್ಕನ್ನು ರಾಜ್ಯ ಅಥವಾ ಇನ್ಯಾರೂ ದಮನಿಸಲು ಸಾಧ್ಯವಿಲ್ಲ ಎಂಬುದನ್ನು ನ್ಯಾಯಾಲಯದ ಆದೇಶ ಸೂಚಿಸುತ್ತದೆ.
ಸೆಪ್ಟೆಂಬರ್ 29ರಂದು ಜಸ್ಟಿಸ್ ಮಹೇಶ್ ತ್ರಿಪಾಠಿ ನೇತೃತ್ವದ ಪೀಠವು, ಪೊಲೀಸ್ ರಕ್ಷಣೆ ಕೋರಿ ಅಪೀಲು ಸಲ್ಲಿಸಿದ್ದ ವಿವಾಹಿತ ಜೋಡಿಯ ಮನವಿಯನ್ನು ತಿರಸ್ಕರಿಸಿತ್ತಲ್ಲದೆ ಮುಸ್ಲಿಂ ಆಗಿದ್ದ ಮಹಿಳೆ ಕೇವಲ ವಿವಾಹದ ಉದ್ದೇಶದಿಂದ ಹಿಂದು ಧರ್ಮಕ್ಕೆ ಮತಾಂತರಗೊಂಡಿದ್ದಳೆಂದು ಹೇಳಿತ್ತು. ಈ ಸಂದರ್ಭ 2014ರಲ್ಲಿ ನೂರ್ ಜಹಾನ್ ಬೇಗಂ ಪ್ರಕರಣದಲ್ಲಿ ಇದೇ ನ್ಯಾಯಾಲಯ ನೀಡಿದ್ದ ತೀರ್ಪನ್ನೂ ಉಲ್ಲೇಖಿಸಲಾಗಿತ್ತು. ನೂರ್ ಜಹಾನ್ ಎಂಬ ಮಹಿಳೆ ಹಿಂದು ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ನಂತರ ವಿವಾಹವಾಗಿದ್ದು ನಂತರ ದಂಪತಿ ಪೊಲೀಸ್ ರಕ್ಷಣೆ ಕೋರಿದ್ದರೂ ಈ ಅಪೀಲನ್ನು ಆ ಸಂದರ್ಭ ತಿರಸ್ಕರಿಸಲಾಗಿತ್ತು.