ಏರ್ಇಂಡಿಯಾ ವನ್-ಬಿ777 ವಿವಿಐಪಿ ವಿಮಾನದಲ್ಲಿ ರಾಷ್ಟ್ರಪತಿ ಪ್ರಯಾಣ
ಹೊಸದಿಲ್ಲಿ, ನ.24: ವಿವಿಐಪಿಗಳ ಪ್ರಯಾಣಕ್ಕೆ ಮೀಸಲಿರುವ ಏರ್ಇಂಡಿಯಾ ವನ್-ಬಿ777 ವಿಮಾನದಲ್ಲಿ ಮಂಗಳವಾರ ಚೆನ್ನೈಗೆ ಪ್ರಯಾಣಿಸುವ ಮೂಲಕ ವಿಮಾನದ ಪ್ರಥಮ ಹಾರಾಟಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಚಾಲನೆ ನೀಡಿದರು ಎಂದು ರಾಷ್ಟ್ರಪತಿ ಭವನದ ಹೇಳಿಕೆ ತಿಳಿಸಿದೆ.
ರಾಷ್ಟ್ರಪತಿಯವರು ಚೆನ್ನೈಯಿಂದ ಆಂಧ್ರಪ್ರದೇಶಕ್ಕೆ ತೆರಳಿ ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ವಿವಿಐಪಿಗಳ ಪ್ರಯಾಣಕ್ಕೆ ಸಿದ್ಧಗೊಳಿಸಿರುವ ಏರ್ಇಂಡಿಯಾ ವನ್-ಬಿ 777 ವಿಮಾನ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು ಹೆಚ್ಚಿನ ಇಂಧನ ಕ್ಷಮತೆಯನ್ನೂ ಹೊಂದಿದೆ. ವಿಮಾನದ ಶಬ್ದದ ಮಟ್ಟ ಅತ್ಯಂತ ಕಡಿಮೆಯಾಗಿದೆ. ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಿ ಮಂತ್ರಿಗಳ ಪ್ರಯಾಣಕ್ಕೆ ಈ ವಿಶೇಷ ವಿಮಾನ ಮೀಸಲಾಗಿರುತ್ತದೆ. ಏರ್ಇಂಡಿಯಾ ವನ್-ಬಿ777 ವಿಮಾನದ ಪ್ರಥಮ ಹಾರಾಟದ ಸಂದರ್ಭ ರಾಷ್ಟ್ರಪತಿ ಕೋವಿಂದ್, ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ವಿಮಾನದ ಪೈಲಟ್, ಸಿಬಂದಿ ವರ್ಗ, ಏರ್ಇಂಡಿಯಾ ತಂಡ ಹಾಗೂ ವಾಯುಪಡೆ ಸಿಬ್ಬಂದಿಯನ್ನು ಅಭಿನಂದಿಸಿದರು.