ಪಿಡಿಪಿಗೆ ಮೂವರು ನಾಯಕರು ರಾಜೀನಾಮೆ
ಮೆಹಬೂಬಾ ಮುಫ್ತಿ
ಶ್ರೀನಗರ, ನ. 26: ಪಿಡಿಪಿಯ ನಾಯಕರಾದ ಧಾಮನ್ ಭಾಸಿನ್, ಪಲ್ಲೈಲ್ ಸಿಂಗ್ ಹಾಗೂ ಪ್ರೀತಮ್ ಕೊತ್ವಾಲ್ ಪಕ್ಷಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ. ಇದು ಪಿಡಿಪಿಯ ವರಿಷ್ಠೆ ಮೆಹಬೂಬಾ ಮುಫ್ತಿಗೆ ಪ್ರಮುಖ ಹಿನ್ನಡೆಯಾಗಿದೆ. ಪಿಡಿಪಿ ನ್ಯಾಷನಲ್ ಕಾನ್ಫರೆನ್ಸ್ನ ‘ಬಿ’ ತಂಡವಾಗಿ ಮಾರ್ಪಟ್ಟಿದೆ ಎಂದು ಈ ನಾಯಕರು ಹೇಳಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ನ ಭ್ರಷ್ಟ ಹಾಗೂ ವಂಶ ರಾಜಕಾರಣಕ್ಕೆ ಜಾತ್ಯತೀತ ಪರ್ಯಾಯ ರೂಪಿಸುವ ಗುರಿಯೊಂದಿಗೆ ಪಿಡಿಪಿ ವರಿಷ್ಠೆ ಮೆಹಬೂಬಾ ಮುಫ್ತಿ ಅವರ ತಂದೆ, ಮಾಜಿ ಮುಖ್ಯಮಂತ್ರಿ ದಿವಂಗತ ಮುಫ್ತಿ ಮುಹಮ್ಮದ್ ಸ್ಥಾಪಿಸಿದ ಪಿಡಿಪಿಗೆ ನಾವು ಆರಂಭದಿಂದಲೇ ಸೇರಿದ್ದೆವು. ಆದರೆ, ಪಕ್ಷ ಮುಫ್ತಿ ಸಾಹೀಬ್ ಅವರ ಅಜೆಂಡಾವನ್ನು ತಿರಸ್ಕರಿಸಿ ನ್ಯಾಷನಲ್ ಕಾನ್ಫರೆನ್ಸ್ನ ‘ಬಿ’ ತಂಡವಾಗಿರುವುದು ದುರಾದೃಷ್ಟಕರ ಎಂದು ಪಿಡಿಪಿಗೆ ಸಲ್ಲಿಸಿದ ಸಂಯುಕ್ತ ರಾಜೀನಾಮೆ ಪತ್ರದಲ್ಲಿ ಈ ನಾಯಕರು ಹೇಳಿದ್ದಾರೆ. ಸೈಯದ್ ಅವರ ಮೂಲ ತತ್ವಕ್ಕೆ ವಿರುದ್ಧವಾದ ಕೆಲವು ಪ್ರಚೋದನಕಾರಿ ಹಾಗೂ ವಿವಾದಾತ್ಮಕ ಹೇಳಿಕೆಯನ್ನು ಪಕ್ಷ ನೀಡಿದೆ ಎಂದು ನಾಯಕರು ತಿಳಿಸಿದ್ದಾರೆ. ‘‘ಪ್ರಸಕ್ತ ಪರಿಸ್ಥಿತಿ ಗಣನೆಗೆ ತೆಗೆದುಕೊಂಡರೆ, ಮುಫ್ತಿ ಮುಹಮ್ಮದ್ ಸೈಯದ್ ಅನುಯಾಯಿಗಳಾದ ನಮಗೆ ಪಿಡಿಪಿಯಲ್ಲಿ ಕೆಲಸ ಮಾಡುವುದು ಕಷ್ಟಕರ. ಯಾಕೆಂದರೆ ಪಿಡಿಪಿ ನ್ಯಾಷನಲ್ ಕಾನ್ಫರೆನ್ಸ್ನ ಬಿ ಟೀಮ್ ಆಗುತ್ತಿದೆ’’ ಎಂದು ಅವರು ಹೇಳಿದ್ದಾರೆ.