ರೈತರ ಪ್ರತಿಭಟನೆಗೆ ಪಂಜಾಬ್ ಸರಕಾರವೇ ಜವಾಬ್ದಾರಿ ಎಂದ ಹರ್ಯಾಣದ ಸಿಎಂ
ಚಂಡಿಗಡ: ಕೃಷಿಗೆ ಸಂಬಂಧಿಸಿ ಕೇಂದ್ರ ಸರಕಾರ ಇತ್ತೀಚೆಗೆ ಜಾರಿಗೆ ತಂದಿರುವ ವಿವಾದಾತ್ಮಕ ಹೊಸ ಕೃಷಿ ಕಾಯ್ದೆಗಳ ವಿರುದ್ಧ ಕುಪಿತಗೊಂಡ ಸಾವಿರಾರು ರೃತರು ದಿಲ್ಲಿ ಚಲೋ ಆಂದೋಲನದಲ್ಲಿ ಭಾಗವಹಿಸಲು ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗುತ್ತಿರುವುದಕ್ಕೆ ಪಂಜಾಬ್ ಸರಕಾರವೇ ಜವಾಬ್ದಾರಿ ಎಂದು ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಖಟ್ಟರ್ ಹೇಳಿದ್ದಾರೆ.
ಶಾಂತಿಯುತವಾಗಿ ದಿಲ್ಲಿಯತ್ತ ಮೆರವಣಿಗೆ ನಡೆಸುತ್ತಿದ್ದ ರೈತರ ಮೇಲೆ ಅಶ್ರುವಾಯು ಹಾಗೂ ಜಲಫಿರಂಗಿ ಸಿಡಿಸಿ ಅವರಿಗೆ ಅಡ್ಡಿಪಡಿಸಿರುವ ಹರ್ಯಾಣ ಸರಕಾರದ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗಿವೆ.
"ರೈತರ ಪ್ರತಿಭಟನೆಗೆ ಅಮರಿಂದರ್ ಸಿಂಗ್ ಜವಾಬ್ದಾರಿ. ಪಂಜಾಬ್ ಮುಖ್ಯಮಂತ್ರಿ ಕಚೇರಿ ಪದಾಧಿಕಾರಿಗಳು ಪ್ರತಿಭಟನೆಯನ್ನು ಮುನ್ನಡೆಸಿದ್ದಾರೆ. ಪಂಜಾಬ್ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿದ್ದರು. ಹರ್ಯಾಣದ ರೈತರು ಪ್ರತಿಭಟನೆಯಿಂದ ದೂರ ಉಳಿದಿದ್ದಾರೆ. ಇದಕ್ಕಾಗಿ ನಾನು ಹರ್ಯಾಣ ರೈತರಿಗೆ ಧನ್ಯವಾದ ಹೇಳುವೆ'' ಎಂದರು.
ಪಂಜಾಬ್, ಹರ್ಯಾಣ ಹಾಗೂ ಉತ್ತರಪ್ರದೇಶ ರಾಜ್ಯಗಳ ಸಾವಿರಾರು ರೈತರು ಟ್ರ್ಯಾಕ್ಟರ್ ಗಳು ಹಾಗೂ ಟ್ರೈಲರ್ ಗಳೊಂದಿಗೆ ಆಹಾರ, ಇಂಧನ ಹಾಗೂ ಅವಶ್ಯಕ ವಸ್ತುಗಳನ್ನು ಹೇರಿಕೊಂಡು ಪೊಲೀಸ್ ಬ್ಯಾರಿಕೇಡ್ ಹಾಗೂ ತಡೆಗೋಡೆಯನ್ನು ಬೇಧಿಸಿ ಶುಕ್ರವಾರ ದಿಲ್ಲಿ ಪ್ರವೇಶಿಸಲು ಯಶಸ್ವಿಯಾಗಿದ್ದಾರೆ.