ಸ್ಟ್ಯಾನ್ ಸ್ವಾಮಿಗೆ ಸಿಪ್ಪರ್ಕಪ್ ಕಳುಹಿಸಲು ಎನ್ಪಿಆರ್ಡಿ ನಿರ್ಧಾರ
ಹೊಸದಿಲ್ಲಿ, ನ.28: ತಲೋಜಾ ಜೈಲಿನಲ್ಲಿರುವ ಹೋರಾಟಗಾರ ಸ್ಟ್ಯಾನ್ ಸ್ವಾಮಿಗೆ ಪಾನೀಯ ಕುಡಿಯಲು ನೆರವಾಗುವ ಸ್ಟ್ರಾ ಮತ್ತು ಸಿಪರ್ಕಪ್ಗಳನ್ನು ಕಳುಹಿಸುವುದಾಗಿ ನ್ಯಾಷನಲ್ ಪ್ಲಾಟ್ಫಾರ್ಮ್ ಫಾರ್ ದಿ ರೈಟ್ಸ್ ಆಫ್ ದಿ ಡಿಸೇಬಲ್ಡ್ (ಎನ್ಪಿಆರ್ಡಿ) ಹೇಳಿದೆ.
ಎಲ್ಗರ್ ಪರಿಷದ್ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಆದಿವಾಸಿ ಹಕ್ಕುಗಳ ಹೋರಾಟಗಾರ , ಪಾರ್ಕಿನ್ಸನ್ ರೋಗದಿಂದ ಬಳಲುತ್ತಿರುವ 83 ವರ್ಷದ ಸ್ಟ್ಯಾನ್ ಸ್ವಾಮಿ ತನಗೆ ಸ್ಟ್ರಾ(ಹೀರುಕಡ್ಡಿ) ಮತ್ತು ಹೀರುಕೊಳವೆಯ ಲೋಟ ಒದಗಿಸಬೇಕೆಂದು ಕೋರಿದ್ದ ಅರ್ಜಿಯ ವಿಚಾರಣೆಯನ್ನು ವಿಶೇಷ ನ್ಯಾಯಾಲಯ ಡಿಸೆಂಬರ್ 4ಕ್ಕೆ ಮುಂದೂಡಿದೆ. ಸ್ಟಾನಿಯವರಿಗೆ ಇನ್ನೂ 7 ದಿನ ದ್ರವಾಹಾರ ಸೇವಿಸಲು ಕಷ್ಟವಾಗದಂತೆ ನಾವೆಲ್ಲಾ ನೆರವಾಗಬೇಕಿದೆ. ಆದ್ದರಿಂದ ಅಂಗವಿಕಲರ ಹಕ್ಕಿಗಾಗಿ ಹೋರಾಟ ನಡೆಸುವ ಎಲ್ಲಾ ಸಂಘಟನೆಗಳು, ಹೋರಾಟಗಾರರು, ಕಾರ್ಯಕರ್ತರು ಈ ಅಭಿಯಾನದಲ್ಲಿ ಕೈಜೋಡಿಸಿ ಅವರಿಗೆ ಸಿಪರ್ಕಪ್ (ಹೀರುಕೊಳವೆಯ ಲೋಟ) ಕಳುಹಿಸಬೇಕು ಎಂದು ಎನ್ಪಿಆರ್ಡಿ ಮನವಿ ಮಾಡಿದೆ.
ಭಾರತವೂ ಸಹಿ ಹಾಕಿರುವ ಹಲವು ಅಂತಾರಾಷ್ಟ್ರೀಯ ಒಪ್ಪಂದ ಮತ್ತು ಕಾನೂನಿನಂತೆ, ವೃದ್ಧರಾಗಿರುವ ಮತ್ತು ಪಾರ್ಕಿನ್ಸನ್ ರೋಗದಿಂದ ಬಳಲುತ್ತಿರುವ ಸ್ಟ್ಯಾನ್ ಸ್ವಾಮಿಯವರ ಕೋರಿಕೆಯನ್ನು ಪರಿಗಣಿಸಬೇಕು. ಇದನ್ನು ನಿರಾಕರಿಸುವುದು ಅವರ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಸಂಸ್ಥೆ ಹೇಳಿದೆ.