ನೂತನ ಕೃಷಿ ಕಾನೂನುಗಳ ವಿರುದ್ಧ ಸುಪ್ರೀಂ ಕದ ತಟ್ಟಿದ ಭಾರತೀಯ ಕಿಸಾನ್ ಯೂನಿಯನ್
ಹೊಸದಿಲ್ಲಿ : ಕೇಂದ್ರ ಜಾರಿಗೊಳಿಸಿರುವ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಕೋರಿ ಭಾರತೀಯ ಕಿಸಾನ್ ಯೂನಿಯನ್ ಇಂದು ಸುಪ್ರೀಂ ಕೋರ್ಟ್ಗೆ ಅಪೀಲು ಸಲ್ಲಿಸಿದೆ.
ಈ ಮೂರು ಕಾನೂನುಗಳ ಜಾರಿ ಕೃಷಿ ಕ್ಷೇತ್ರವನ್ನು ವಾಣಿಜ್ಯೀಕರಣಗೊಳಿಸುತ್ತವೆ ಹಾಗೂ ರೈತರು ಕಾರ್ಪೊರೇಟ್ ಸಂಸ್ಥೆಗಳ ಹಂಗಿನಲ್ಲಿರುವಂತೆ ಮಾಡುತ್ತದೆ ಎಂದು ಯೂನಿಯನ್ ಅಧ್ಯಕ್ಷ ಭಾನು ಪ್ರತಾಪ್ ಸಿಂಗ್ ಅವರು ಸಲ್ಲಿಸಿರುವ ಈ ಅಪೀಲಿನಲ್ಲಿ ತಿಳಿಸಲಾಗಿದೆ.
ರಾಜಧಾನಿ ಗಡಿಯಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯನ್ನೂ ಉಲ್ಲೇಖಿಸಿರುವ ಅಪೀಲು, ರೈಲ್ ರೋಕೋ ಚಳುವಳಿಯೂ ಸದ್ಯದಲ್ಲಿಯೇ ಆರಂಭಗೊಳ್ಳಲಿದೆ ಎಂದು ಹೇಳಿದೆ.
ಸಾಕಷ್ಟು ಚರ್ಚೆಗಳಿಲ್ಲದೆ ನೂತನ ಕಾನೂನುಗಳನ್ನು ಜಾರಿಗೊಳಿಸಲಾಗಿದೆ ಎಂದೂ ಅಪೀಲಿನಲ್ಲಿ ಆರೋಪಿಸಲಾಗಿದೆ.
ಈ ಕೃಷಿ ಕಾನೂನುಗಳನ್ನು ಪ್ರಶ್ನಿಸಿ ಈಗಾಗಲೇ ಸಲ್ಲಿಸಲಾಗಿರುವ ಹಲವಾರು ಅಪೀಲುಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಈ ಹಿಂದೆಯೇ ನೋಟಿಸ್ ಜಾರಿಗೊಳಿಸಿದೆ.
Next Story