ಶಾಸಕ ಸ್ಥಾನ ತ್ಯಜಿಸಿದ ಸುವೇಂದು ಅಧಿಕಾರಿ: ತೃಣಮೂಲ ಕಾಂಗ್ರೆಸ್ ಗೆ ತೀವ್ರ ಹಿನ್ನಡೆ
ಕೋಲ್ಕತಾ: ತೃಣಮೂಲ ಕಾಂಗ್ರೆಸ್ ನಾಯಕ ಸುವೇಂದು ಅಧಿಕಾರಿ ಬುಧವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಳೆದ ತಿಂಗಳು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂಪುಟದಲ್ಲಿ ಸಚಿವ ಸ್ಥಾನವನ್ನು ತ್ಯಜಿಸಿದ್ದ ಅಧಿಕಾರಿ ಇದೀಗ ಪಕ್ಷದಿಂದ ಮತ್ತಷ್ಟು ದೂರವಾಗಿದ್ದಾರೆ.
50ರ ಹರೆಯದ ಅಧಿಕಾರಿ ಡಿ.19ರಂದು ರಾಜ್ಯಕ್ಕೆ ಭೇಟಿ ನೀಡಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಸೇರಲಿದ್ದಾರೆ ಎಂಬ ಊಹಾಪೋಹ ಹಬ್ಬಿದೆ.
ಅಧಿಕಾರಿ ತನ್ನ ತವರು ಪಟ್ಟಣ ಮಿಡ್ನಾಪುರ ಜಿಲ್ಲೆಯ ಮೆದಿನಿಪುರದಲ್ಲಿ ನಡೆಯುವ ಬಿಜೆಪಿ ಕಾರ್ಯಕ್ರಮದಲ್ಲಿ ಕಮಲದ ಕೈ ಹಿಡಿಯುವ ಸಾಧ್ಯತೆಯಿದೆ.
ತೃಣಮೂಲ ಕಾಂಗ್ರೆಸ್ ಪಕ್ಷ ಅಧಿಕಾರಿಯನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿತ್ತು. ಮಮತಾ ಬ್ಯಾನರ್ಜಿ ಅವರ ಅಳಿಯ, ಸಂಸದ ಅಭಿಷೇಕ್ ಬ್ಯಾನರ್ಜಿ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಅಧಿಕಾರಿ ಅವರು ಮಾಲ್ಡ, ಮುರ್ಷಿದಾಬಾದ್, ಪುರುಲಿಯಾ,ಬಂಕುರಾ ಹಾಗೂ ಪಶ್ಚಿಮಮಿಡ್ನಾಪುರದ ಸ್ಥಳೀಯ ನಾಯಕರ ಮೇಲೆ ಪ್ರಭಾವ ಹೊಂದಿದ್ದಾರೆ. ಸುವೇಂದು ಅಧಿಕಾರಿ ಪಕ್ಷ ತ್ಯಜಿಸಿರುವ ಕಾರಣ ತೃಣಮೂಲ ಕಾಂಗ್ರೆಸ್ ಗೆ 50ಕ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಕೂಲ ಪರಿಣಾಮಬೀರುವ ಸಾಧ್ಯತೆಯಿದೆ.