ಟಿಎಂಸಿಯಲ್ಲಿ ಮಮತಾ ಬ್ಯಾನರ್ಜಿ ಮಾತ್ರ ಉಳಿಯಲಿದ್ದಾರೆ, ಇದು ಆರಂಭ ಮಾತ್ರ: ಅಮಿತ್ ಶಾ
ಕೊಲ್ಕತ್ತಾ,ಡಿ.19: ತೃಣಮೂಲ ಕಾಂಗ್ರೆಸ್ ನ ಪ್ರಭಾವಿ ನಾಯಕ ಸುವೇಂದು ಅಧಿಕಾರಿ ಸೇರಿದಂತೆ ಕೆಲವು ಬಂಡಾಯ ನಾಯಕರು ಇಂದು ಕೇಂದ್ರ ಗೃಹಸಚಿವ ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಪಕ್ಷ ಸೇರಿದರು. ಪಶ್ಚಿಮ ಬಂಗಾಳದ ಪಶ್ಚಿಮ್ ಮೆದಿನೀಪುರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
“ಹಲವಾರು ಮಂದಿ ನಾಯಕರು ತೃಣಮೂಲ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರುತ್ತಿದ್ದಾರೆ. ಇದಕ್ಕೆ ಕಾರಣವೇನೆಂದರೆ, ಸದ್ಯದ ಪಶ್ಚಿಮ ಬಂಗಾಳದ ಭ್ರಷ್ಟಾಚಾರದಿಂದ ತುಂಬಿದ ಹದಗೆಟ್ಟ ಆಡಳಿತ. ದೀದೀ… ಇದು ಕೇವಲ ಪ್ರಾರಂಭ ಮಾತ್ರ. ಚುನಾವಣೆಯ ಸಂದರ್ಭ ಹತ್ತಿರ ಬರುತ್ತಿದ್ದಂತೆಯೇ ಪಕ್ಷದಲ್ಲಿ ನೀವು ಮಾತ್ರ ಏಕಾಂಗಿಯಾಗಿ ಉಳಿಯುತ್ತೀರಿ” ಎಂದು ಟೀಕಿಸಿದರು.
ಕಾರ್ಯಕ್ರಮದಲ್ಲಿ ಟಿಎಂಸಿಯ ಮಾಜಿ ಪ್ರಭಾವಿ ನಾಯಕ ಸುವೇಂದು ಅಧಿಕಾರಿ, ಸಂಸತ್ ಸದಸ್ಯ ಸುನೀಲ್ ಮೊಂಡಲ್ ಮಾತ್ರವಲ್ಲೇ ಇತರ ಪಕ್ಷದ 9 ಮಂದಿ ರಾಜಕೀಯ ನಾಯಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಕೆಳಗಿಳಿಸಿ ಅಧಿಕಾರಕ್ಕೇರಲು ಪಶ್ವಿಮ ಬಂಗಾಳದಲ್ಲಿ ಬಿಜೆಪಿ ಅವಿರತ ಶ್ರಮ ನಡೆಸುತ್ತಿದೆ.