ಅಮಿತ್ ಶಾ ಹೇಳಿದ್ದೆಲ್ಲವೂ ಸುಳ್ಳಿನ ಕಂತೆ: ಮಮತಾ ಬ್ಯಾನರ್ಜಿ
ಕೋಲ್ಕತಾ: ಪಶ್ಚಿಮಬಂಗಾಳದ ಅಭಿವೃದ್ಧಿಯ ಕುರಿತಂತೆ ಕೇಂದ್ರ ಗೃಹಸಚಿವರಾದ ಅಮಿತ್ ಶಾ ಅಂಕಿ-ಅಂಶ ಸಹಿತ ನೀಡಿರುವ ಮಾಹಿತಿ ಎಲ್ಲವೂ ಸುಳ್ಳಿನ ಕಂತೆಯಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಡಿಸೆಂಬರ್ 28ರಂದು ಅಧಿಕೃತ ಸಭೆಗಾಗಿ ಬಿರ್ಭಮ್ ಜಿಲ್ಲೆಗೆ ಭೇಟಿ ನೀಡಲಿದ್ದು, ಮರುದಿನ ರೋಡ್ ಶೋ ನಡೆಸಿ ಮಾಧ್ಯಮದೊಂದಿಗೆ ಮಾತನಾಡುವೆ ಎಂದು ಮುಖ್ಯಮಂತ್ರಿ ಘೋಷಿಸಿದರು.
"ಅಮಿತ್ ಜೀ ನಿಮಗೆ ನಾನು ಹೇಳಲು ಬಯಸುತ್ತೇನೆ ನೀವು ಗೃಹ ಸಚಿವರು ನಿಮ್ಮ ಪಕ್ಷದ ಕಾರ್ಯಕರ್ತರು ನೀಡಿರುವ ಸುಳ್ಳನ್ನು ಸರಿಯಾಗಿ ಪರಿಶೀಲಿಸದೆ ಹೇಳುವುದು ನಿಮಗೆ ಶೋಭೆ ತರುವುದಿಲ್ಲ, ನಾನು ಮಂಗಳವಾರ ಈ ಕುರಿತು ವಿವರವಾದ ಪ್ರತಿಕ್ರಿಯೆ ನೀಡುವೆ'' ಎಂದು ಮಮತಾ ಹೇಳಿದರು..
"ನಾನು ಇಂದು ಶಾ ಹೇಳಿರುವ ಎರಡು ವಿಚಾರದ ಕುರಿತು ಮಾತ್ರ ಮಾತನಾಡುವೆ. ಕೈಗಾರಿಕೆ ಕ್ಷೇತ್ರದಲ್ಲಿ ನಮ್ಮ ರಾಜ್ಯದ ಸಾಧನೆ ಶೂನ್ಯ ಎಂದು ಶಾ ಹೇಳುತ್ತಾರೆ. ಎಂಎಸ್ಎಂಇಯಲ್ಲಿ ನಾವು ನಂ.1 ಇದ್ದೇವೆ. ರಾಜ್ಯದ ಹಳ್ಳಿಗಳ ರಸ್ತೆ ಸರಿಯಿಲ್ಲ ಎಂದು ಅವರು ಹೇಳುತ್ತಾರೆ. ಹಳ್ಳಿಯ ರಸ್ತೆ ನಿರ್ಮಾಣದಲ್ಲಿ ನಾವು ಅಗ್ರಸ್ಥಾನದಲ್ಲಿದ್ದೇವೆ ಎಂದು ಕೇಂದ್ರ ಸರಕಾರ ನೀಡಿರುವ ಮಾಹಿತಿಯಲ್ಲಿದೆ'' ಎಂದರು.
ಶನಿವಾರ ಬೋಲಾಪುರದಲ್ಲಿ ರೋಡ್ ಶೋ ನಡೆಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಶಾ, ತೃಣಮೂಲ ಕಾಂಗ್ರೆಸ್ ನೇತೃತ್ವದ ಪಶ್ಚಿಮಬಂಗಾಳ ಸರಕಾರ ಉಳಿದೆಲ್ಲಾ ರಾಜ್ಯಗಳಿಗಿಂತ ಹಿಂದುಳಿದಿದೆ. ಭ್ರಷ್ಟಾಚಾರ ಹಾಗೂ ಸುಲಿಗೆ ವಿಚಾರದಲ್ಲಿ ಮುಂದಿದೆ ಎಂದು ಹೇಳಿದ್ದರು.