ತಾನು ಚುನಾವಣೆಯಲ್ಲಿ ಸೋತರೂ ನಾಲ್ಕು ಕುಟುಂಬಗಳಿಗೆ ಮನೆ ಕಟ್ಟಲು ಸ್ಥಳ ದಾನ ಮಾಡಿದ ಸಾಜಿದಾ
‘ಸೋತು ಗೆದ್ದ ಪಂಚಾಯತ್ ಅಭ್ಯರ್ಥಿ’
PHOTO: news8plus.com
ಪೆರುವಳ್ಳೂರು,ಡಿ.23: ಚುನಾವಣೆಯ ಸಂದರ್ಭದಲ್ಲಿ ಮಾತ್ರ ಮತದಾರರನ್ನು ಓಲೈಕೆ ಮಾಡಿ ಬಳಿಕ ನಾಪತ್ತೆಯಾಗುವ ಬಹುತೇಕ ಅಭ್ಯರ್ಥಿಗಳ ನಡುವೆ ಕೇರಳದ ಗ್ರಾಮ ಪಂಚಾಯತ್ ನಲ್ಲಿ ಸ್ಪರ್ಧಿಸಿದ್ದ ಸಾಜಿದಾ ಹೈದರ್ ಮಾದರಿಯಾಗಿದ್ದಾರೆ. ತಾನು ಚುನಾವಣಾ ಪ್ರಚಾರಕ್ಕೆಂದು ತೆರಳಿದ್ದ ವೇಳೆ ಕೆಲವು ಮನೆಗಳ ಅವ್ಯವಸ್ಥೆಯನ್ನು ಕಂಡು ತಮ್ಮ ಸ್ವಂತ ಜಾಗದಿಂದಲೇ ನಾಲ್ಕು ಕುಟುಂಬಗಳಿಗೆ ಮನೆ ಕಟ್ಟಲು ತಲಾ ಮೂರು ಸೆಂಟ್ಸ್ ಜಾಗ ನೀಡಿದ್ದಾರೆಂದು ತಿಳಿದು ಬಂದಿದೆ
ಅಷ್ಟಕ್ಕೂ ಸಾಜಿದಾ ಗೆಲುವುಪಡೆದ ಅಭ್ಯರ್ಥಿಯೇನಲ್ಲ. ಪೆರುವಳ್ಳೂರು ಪಂಚಾಯತ್ ನ 13ನೇ ವಾರ್ಡ್ ನಿಂದ ಸ್ಫರ್ಧಿಸಿದ ಸಾಜಿದಾ ಕೇವಲ 42 ಮತಗಳ ಅಂತರದಿಂದ ಚುನಾವಣೆಯಲ್ಲಿ ಸೋಲನುಭವಿಸಿದ್ದರು. ಆದರೆ ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ಗುಣದ ನಡುವೆ ಸೋಲು ಮತ್ತು ಗೆಲುವು ಗಣನೆಗೆ ಬರಲೇ ಇಲ್ಲ.
ಚುನಾವಣಾ ಪ್ರಚಾರಕ್ಕೆಂದು ಮನೆ ಮನೆಗೆ ತೆರಳಿದ್ದ ಸಾಜಿದಾರವರು ಕೆಲವು ಮನೆಗಳ ಪರಿಸ್ಥೀತಿಯನ್ನು ಕಣ್ಣಾರೆ ಕಂಡಿದ್ದರು. ಬಳಿಕ ಚುನಾವಣೆಯಲ್ಲಿ ಸೋಲನುಭವಿಸಿದರೂ ಕೂಡಾ, ನಾಲ್ಕು ಬಡ ಕುಟುಂಬಗಳಿಗೆ ಮನೆ ಕಟ್ಟಲೆಂದು ತಲಾ ಮೂರು ಸೆಂಟ್ ಜಾಗವನ್ನು ನೀಡಿದ್ದಾರೆ. ಪತಿ ಮತ್ತು ಮಕ್ಕಳು ಕೂಡಾ ಸಾಜಿದಾಗೆ ಸಾಥ್ ನೀಡಿದ್ದರು ಎಂದು news8plus.com ವರದಿ ಮಾಡಿದೆ.