ಮಮತಾ ಬ್ಯಾನರ್ಜಿ ಅಸೂಯೆಯಿಂದ ವಿಶ್ವ ಭಾರತಿ ವಿವಿ ಶತಮಾನೋತ್ಸವಕ್ಕೆ ಹಾಜರಾಗಿಲ್ಲ ಎಂದ ಬಿಜೆಪಿ
ಕಾರ್ಯಕ್ರಮಕ್ಕೆ ನನಗೆ ಆಹ್ವಾನವೇ ಇರಲಿಲ್ಲ ಎಂದ ಪ.ಬಂಗಾಳ ಸಿಎಂ
ಹೊಸದಿಲ್ಲಿ:ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಉಳಿದಿದ್ದು, ರಾಜ್ಯದಲ್ಲಿ ನಡೆಯುವ ಹೆಚ್ಚಿನೆಲ್ಲಾ ಕಾರ್ಯಕ್ರಮಗಳು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಹಾಗೂ ಅದರ ಪ್ರಮುಖ ಎದುರಾಳಿ ಬಿಜೆಪಿಗೆ ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆಯಾಗಲಿದೆ.
ಗುರುವಾರ ಶಾಂತಿನಿಕೇತನದಲ್ಲಿ ನಡೆದ ವಿಶ್ವಭಾರತಿ ವಿವಿ ಶತಮಾನೋತ್ಸವ ಕಾರ್ಯಕ್ರಮ ಇದಕ್ಕೆ ಹೊರತಾಗಿರಲಿಲ್ಲ. ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಕಾರ್ಯಕ್ರಮದಿಂದ ದೂರ ಉಳಿದಿದ್ದರು. ತನಗೆ ಕಾರ್ಯಕ್ರಮಕ್ಕೆ ಆಹ್ವಾನವಿರಲಿಲ್ಲ ಎಂದು ಅವರು ಹೇಳಿದ್ದಾರೆ.
"ಸ್ಥಾಪನೆಯ 100 ವರ್ಷಗಳನ್ನು ಪೂರ್ಣಗೊಳಿಸಿರುವ ವಿಶ್ವಭಾರತಿ ಹೆಮ್ಮೆಯ ಭಾವವನ್ನು ಉಂಟುಮಾಡುತ್ತಿದೆ" ಎಂದು ಮಮತಾ ಬ್ಯಾನರ್ಜಿ ಟ್ವೀಟಿಸಿದ್ದಾರೆ.
ಪ್ರಧಾನಿ ಮೋದಿ ವೀಡಿಯೊ ಕಾನ್ಪರೆನ್ಸ್ ಮೂಲಕ ಭಾಷಣ ಮಾಡಿದರು. ಅವರು ಭಾಷಣ ಮಾಡಿದ ಬಳಿಕ ಪ್ರತಿಕ್ರಿಯಿಸಿದ ಟಿಎಂಸಿಯ ಹಿರಿಯ ನಾಯಕ ಬ್ರಾತ್ಯ ಬಸು, ಪ್ರಧಾನಿ ಅವರು ಬೋಧಿಸದಂತೆ ನಡೆದುಕೊಳ್ಲುತ್ತಾರೆಯೇ ಎಂದು ಪ್ರಶ್ನಿಸಿದರು.
ವಿವಿ ಕಾರ್ಯಕ್ರಮದಿಂದ ದೂರ ಉಳಿದಿದ್ದ ಬ್ಯಾನರ್ಜಿ ಮೇಲೆ ವಾಗ್ದಾಳಿ ನಡೆಸಿರುವ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, “ಮಮತಾ ಅವರು ಅಸೂಯೆ, ರಾಜಕೀಯ ದುರುದ್ದೇಶ ಹಾಗೂ ವೈರತ್ವದ ಕಾರಣಕ್ಕೆ ಈ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದಾರೆ’’ ಎಂದು ಆರೋಪಿಸಿದ್ದಾರೆ.
"ಮಮತಾ ಅವರು ರಾಜ್ಯದ ಸಂಸ್ಕೃತಿಯನ್ನು ಹಾಗೂ ರವೀಂದ್ರ ನಾಥ್ ಟಾಗೋರ್ ಅವರ ಪ್ರತಿಷ್ಠೆಗೆ ಭಂಗ ತರುತ್ತಿದ್ದಾರೆ'' ಎಂದು ಆರೋಪಿಸಿದ ನಡ್ಡಾ, "ಬಂಗಾಳದ ಜನತೆ ಮಮತಾ ಅವರ ಅಹಂಕಾರಕ್ಕೆ ತಕ್ಕ ಪಾಠ ಕಲಿಸುತ್ತಾರೆ. ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತಾರೆ'' ಎಂದರು.