ಕೇರಳ: ವಿವಾಹವಾದ ಮೂರನೆ ತಿಂಗಳಲ್ಲಿ ಪತ್ನಿಯ ಕುಟುಂಬಸ್ಥರಿಂದ ಕೊಲೆಯಾದ ಯುವಕ
ಪಾಲಕ್ಕಾಡ್,ಡಿ.26: ಯುವತಿಯ ಮನೆಯವರ ವಿರೋಧದ ನಡುವೆಯೇ ಜೋಡಿಯೊಂದು ವಿವಾಹವಾಗಿದ್ದು, ನಿರಂತರ ಬೆದರಿಕೆಯ ಬಳಿಕ ಯುವಕನನ್ನು ಯುವತಿಯ ಕುಟುಂಬಸ್ಥರು ಮಾರಕಾಯುಧಗಳನ್ನು ಬಳಸಿ ಕೊಲೆಗೈದ ಘಟನೆಯು ಪಾಲಕ್ಕಾಡ್ ನ ತೇನ್ ಕುರಿಶ್ಶಿ ಸಮೀಪ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೊಲೆಗೈಯಲ್ಪಟ್ಟ ಯುವಕನನ್ನು ಅನೀಶ್ (27) ಎಂಧು ಗುರುತಿಸಲಾಗಿದೆ. ಕೆಲಸ ಮುಗಿಸಿ ಮನೆಗೆ ಹಿಂದಿರುಗುವ ವೇಳೆ ಕೃತ್ಯ ನಡೆಸಲಾಗಿದ್ದು, ಗಂಭೀರ ಗಾಯಗೊಂಡಿದ್ದ ವ್ಯಕ್ತಿಯು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ದಾರಿಯಲ್ಲಿ ಕೊನೆಯುಸಿರೆಳೆದಿದ್ದಾರೆಂದು ವರದಿ ತಿಳಿಸಿದೆ.
ಶ್ರೀಮಂತ ಮನೆತನದ ಯುವತಿಯೊಂದಿಗೆ ಅನೀಶ್ ಪ್ರೇಮ ಸಂಬಂಧ ಹೊಂದಿದ್ದು, ಇದು ಯುವತಿಯಮನೆಯವರಿಗೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಮೂರು ತಿಂಗಳ ಹಿಂದೆ ಯುವತಿಯ ಕುಟುಂಬದ ವಿರೋಧದ ನಡುವೆಯೂ ಅವರಿಬ್ಬರು ಮದುವೆಯಾಗಿದ್ದರು. ಪ್ರಕರಣವನ್ನು ಯುವತಿಯ ಕುಟುಂಬದೊಂದಿಗೆ ಮಾತನಾಡಿ ಇತ್ಯರ್ಥಗೊಳಿಸಲು ಪ್ರಯತ್ನಿಸಿದರೂ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿತ್ತು ಎನ್ನಲಾಗಿದೆ.
ಶುಕ್ರವಾರದಂದು ಸಂಜೆ ಅನೀಶ್ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಯುವತಿಯ ತಂದೆ ಪ್ರಭು ಕುಮಾರ್ ಹಾಗೂ ಮಾವ ಸುರೇಶ್ ಎಂಬವರು ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡಿದ್ದ ಅನೀಶ್ ರನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.