ರಾಷ್ಟ್ರೀಯ ಪಕ್ಷ ಮಿತ್ರ ಪಕ್ಷವಾಗುವುದು ಬೇಕಿಲ್ಲ : ಬಿಜೆಪಿಗೆ ಎಐಎಡಿಎಂಕೆಯ ತೀಕ್ಷ್ಣ ಸಂದೇಶ
ಚೆನ್ನೈ : ನಮಗೆ ಆದೇಶ ನೀಡುವಂತಹ ರಾಷ್ಟ್ರೀಯ ಪಕ್ಷ ನಮ್ಮ ಮಿತ್ರ ಪಕ್ಷವಾಗುವುದು ನಮಗೆ ಬೇಕಿಲ್ಲ ಎಂದು ಹೇಳುವ ಮೂಲಕ ತಮಿಳುನಾಡಿನ ಆಡಳಿತ ಎಐಎಡಿಎಂಕೆ ತನ್ನ ಮಿತ್ರ ಪಕ್ಷ ಬಿಜೆಪಿಗೆ ಸೂಚ್ಯ ಹಾಗೂ ಅಷ್ಟೇ ಸ್ಪಷ್ಟ ಸಂದೇಶ ರವಾನಿಸಿದೆ.
ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಇ ಕೆ ಪಳನಿಸ್ವಾಮಿ ಅವರೇ ಎಐಎಡಿಎಂಕೆಯ ಮುಂದಿನ ಸೀಎಂ ಅಭ್ಯರ್ಥಿಯೂ ಆಗಲಿದ್ದಾರೆ ಎಂದು ಪಕ್ಷ ಹೇಳಿದೆ. ಪಳನಿಸ್ವಾಮಿ ಅವರೇ ಮುಂದಿನ ಸೀಎಂ ಅಭ್ಯರ್ಥಿಯೇ ಎಂಬ ಕುರಿತಾದ ಪ್ರಶ್ನೆಗೆ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಪ್ರತಿಕ್ರಿಯಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಎಐಎಡಿಎಂಕೆಯ ಈ ಹೇಳಿಕೆ ಬಂದಿದೆ.
ಮೈತ್ರಿಕೂಟದ ನೇತೃತ್ವವನ್ನು ಎಐಎಡಿಎಂಕೆ ವಹಿಸಿಕೊಳ್ಳಲಿದೆ ಎಂದು ಪಕ್ಷದ ಸಂಸದ ಕೆ ಪಿ ಮುನುಸಾಮಿ ರವಿವಾರ ಹೇಳಿದ್ದಾರೆ. "ಆದರೆ ಯಾವುದೇ ರಾಷ್ಟ್ರೀಯ ಪಕ್ಷ ಬೇರೆ ರೀತಿಯ ನಿರ್ದೇಶನ ನೀಡಲು ಬಯಸಿದರೆ, ಅವರು ಈ ಮಿತ್ರ ಕೂಟದ ಭಾಗವಾಗಿರದೇ ಇದ್ದರೆ ಸ್ವಾಗತ'' ಎಂದು ಅವರು ಹೇಳಿದರು.
ತಮಿಳುನಾಡಿನಲ್ಲಿ ಬಿಜೆಪಿ ಯಾವುದೇ ಶಾಸಕ ಹಾಗೂ ಸಂಸದನನ್ನು ಹೊಂದಿಲ್ಲದೇ ಇರುವುದು ಇಲ್ಲಿ ಗಮನಾರ್ಹ.