ಕೊರೋನ ಸೋಂಕು: ಉತ್ತರಾಖಂಡ ಸಿಎಂ ರಾವತ್ ಎಐಐಎಂಎಸ್ಗೆ ದಾಖಲು
ಡೆಹ್ರಾಡೂನ್, ಡಿ.28: ಕೊರೋನ ಸೋಂಕು ದೃಢಪಟ್ಟ ಬಳಿಕ ಡೆಹ್ರಾಡೂನ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ರವಿವಾರ ತೀವ್ರ ಜ್ವರದಿಂದ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಅವರನ್ನು ಹೊಸದಿಲ್ಲಿಯ ಅಖಿಲಭಾರತ ವೈದ್ಯವಿಜ್ಞಾನ ಸಂಸ್ಥೆ(ಎಐಐಎಂಎಸ್)ಗೆ ದಾಖಲಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಇದೀಗ ಅವರ ಆರೋಗ್ಯ ಸುಧಾರಿಸಿದೆ. ರವಿವಾರ ರಾತ್ರಿಯಿಂದ ಜ್ವರವೂ ಕಡಿಮೆಯಾಗಿದೆ. ಅವರ ಶ್ವಾಸಕೋಶದಲ್ಲಿ ಸ್ವಲ್ಪ ಸೋಂಕಿನ ಸಮಸ್ಯೆಯಿದೆ ಎಂದು ವೈದ್ಯರು ಹೇಳಿದ್ದಾರೆ. ಕೊರೋನ ಸೋಂಕು ಪರೀಕ್ಷೆಯಲ್ಲಿ ‘ಪಾಸಿಟಿವ್’ ಎಂದು ವರದಿ ಬಂದ ಹಿನ್ನೆಲೆಯಲ್ಲಿ ರಾವತ್ ಡಿಸೆಂಬರ್ 18ರಿಂದ ಮನೆಯಲ್ಲೇ ಕ್ವಾರಂಟೈನ್ನಲ್ಲಿದ್ದರು. ರವಿವಾರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಡೆಹ್ರಾಡೂನ್ನ ಸರಕಾರಿ ಡೂನ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಜೆಯ ವೇಳೆ ಜ್ವರ ತೀವ್ರಗೊಂಡ ಕಾರಣ ದಿಲ್ಲಿ ಎಐಐಎಂಎಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅವರ ಪತ್ನಿ ಮತ್ತು ಪುತ್ರಿಯ ಕೊರೋನ ಪರೀಕ್ಷೆಯಲ್ಲೂ ಪೊಸಿಟಿವ್ ವರದಿ ಬಂದಿದೆ ಎಂದು ವೈದ್ಯರು ಹೇಳಿದ್ದಾರೆ.