ನಾನು ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ, ಜನ ಸೇವೆ ಮಾಡುತ್ತೇನೆ: ರಜಿನಿಕಾಂತ್
ಚೆನ್ನೈ: ಇತ್ತೀಚೆಗಷ್ಟೇ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಕುರಿತು ಡಿಸೆಂಬರ್ ಅಂತ್ಯಕ್ಕೆ ಘೋಷಣೆ ಮಾಡುತ್ತೇನೆ ಎಂದು ಹೇಳಿದ್ದ ನಟ ರಜಿನಿಕಾಂತ್, ರಾಜಕೀಯ ದಿಂದ ಸಂಪೂರ್ಣವಾಗಿ ದೂರವಿರಲು ಬಯಸಿದ್ದಾರೆ.
ರಕ್ತ ಒತ್ತಡದಿಂದಾಗಿ ಆಸ್ಪತ್ರೆಗೆ ದಾಖಲಾಗಿ ಎರಡು ದಿನಗಳ ಹಿಂದೆಯಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ರಜಿನಿಕಾಂತ್ ಇಂದು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.
"ನಾನು ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂದು ಹೇಳಲು ತುಂಬಾ ಬೇಸರವಾಗುತ್ತಿದೆ. ಈ ನಿರ್ಧಾರವನ್ನು ಪ್ರಕಟಿಸಲು ಎಷ್ಟು ನೋವಾಗುತ್ತಿದೆ ಎನ್ನುವುದು ನನಗೆ ಮಾತ್ರ ಗೊತ್ತಿದೆ. ಚುನಾವಣಾ ರಾಜಕೀಯಕ್ಕೆ ಪ್ರವೇಶಿಸದೇ ನಾನು ಜನ ಸೇವೆ ಮಾಡುತ್ತೇನೆ. ಈ ನಿರ್ಧಾರವು ನನ್ನ ಅಭಿಮಾನಿಗಳಿಗೆ ಬೇಸರ ತರಬಹುದು. ಆದರೆ ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡಿ" ಎಂದು ಹೇಳಿಕೆಯೊಂದರಲ್ಲಿ ರಜಿನಿಕಾಂತ್ ಹೇಳಿದ್ದಾರೆ.
ಎರಡು ವರ್ಷಗಳ ಹಿಂದೆ ರಜಿನಿ ಮಕ್ಕಳ್ ಮಂದ್ರಮ್ನ್ನು ಸ್ಥಾಪಿಸಿದ್ದ ರಜಿನಿಕಾಂತ್ ಡಿಸೆಂಬರ್ 31ರಂದು ರಾಜಕೀಯ ಪಕ್ಷವನ್ನು ಘೋಷಿಸುವುದಾಗಿ ಇತ್ತೀಚೆಗೆ ಪ್ರಕಟಿಸಿದ್ದರು. ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಐದು ತಿಂಗಳ ಮೊದಲು ಜನವರಿಯಲ್ಲಿ ರಾಜಕೀಯ ಪಕ್ಷವನ್ನು ಆರಂಭಿಸುವುದಾಗಿ ರಜಿನಿ ಹೇಳಿದ್ದರು.